This page has been fully proofread once and needs a second look.

"ಬುದ್ಧಿಸಾಗರ, ವಾದಿಸಿಂಹರು ಲೋಕದೊಳು ಖ್ಯಾತರು
ಭೂಲೋಕದಲ್ಲೆಲ್ಲ ಜಯಭೇರಿ ಹೊಡೆದವರು
ಇಂಥ ಪಂಡಿತರನ್ನು ಕ್ಷಣದಲ್ಲಿ ನಿಗ್ರಹಿಸಿ
ಅದ್ಭುತವ ತೋರಿದರು ಆನಂದ ತೀರ್ಥರು"
ಇಂತೆಂದು ಜನರೆಲ್ಲ ಮೂಕ ವಿಸ್ಮಿತರಾಗಿ
ಕುಣಿದು, ಕೊಂಡಾಡಿದರು ಆಚಾರ್ಯರನ್ನು ॥ ೧೬ ॥
 
ಇಂತಿರಲು ಆಚಾರ್ಯ ಆನಂದ ತೀರ್ಥರು
ತರ್ಕ ವಿದ್ಯಾ ನಿಪುಣ ಶಿಷ್ಯರನು ಕುರಿತು
ಮಣಿಮಂತ ವಿರಚಿತ ಸೂತ್ರಭಾಷ್ಯದ ಬಗ್ಗೆ
ಮೆಲುನಗೆಯ ಸೂಸುವ ಪರಿಹಾಸ ದನಿಯಲ್ಲಿ
ನುಡಿದ ಮಾತುಗಳನ್ನು ಆಲಿಸುತ ಆ ಸುರರು
ಪರಿಪರಿಯ ಬಗೆಯಲ್ಲಿ ಆನಂದ ಪೊಂದಿದರು ॥ ೧೭ ॥
 
ಶಂಕರ ಭಾಷ್ಯದ ಖಂಡನೆ
 
ಶಾಂಕರ ಪ್ರತಿಪಾದ್ಯ ಸೂತ್ರಗಳ ಭಾಷ್ಯ
ಆಭಾಸ, ಮಿಥ್ಯೆಗಳ ಸರಮಾಲೆಯಹುದು
ಪರಿಶುದ್ಧ ಮತಿಯುಳ್ಳ ಪಂಡಿತರ ಮಾತಿಂದ
ಬ್ರಹ್ಮಸೂತ್ರದ ಭಾವ ನಾವರಿಯಬೇಕು
ದುರ್ಭಾಷ್ಯವೆಲ್ಲರಲು ಈಗ ಸತ್ಕ್ರತವು
ಇದು ಎಂಥ ಅಚ್ಚರಿ! ಎಂತಹ ಸೋಜಿಗ! ॥ ೧೮ ॥
 
ಇಂತು ಪೇಳುತ ನಮ್ಮ ಆನಂದ ತೀರ್ಥರು
ಆ ಭಾಷ್ಯದಲ್ಲಿನ ಪ್ರಬಲ ದೋಷವನೆಲ್ಲ
ತೆರೆದಿಟ್ಟು ತೋರಿದರು ಮತ್ತೆ ಮತ್ತೆ
ವಿಸ್ಮಯವ ಪೊಂದಿದರು ನೆರೆದ ಪಂಡಿತರೆಲ್ಲ
ಆಚಾರ್ಯ ವಾಣಿಯಲಿ ಹುರುಳಿಲ್ಲವೆಂದು
ವಾದಿಸಲಸಮರ್ಥ ವಾಕ್ಯಾರ್ಥ ನಿಪುಣರು ॥ ೧೯ ॥