This page has been fully proofread once and needs a second look.

ಪರಿವಾರ ಸಹಿತ ಬಂದರಾ ಮಧ್ವರು
ಅವರನ್ನು ಕಾಣುತ್ತ ಸಜ್ಜನರು ಎಲ್ಲ
ಮಂದಹಾಸದ ಮೊಗದ ಫುಲ್ಲಾಕ್ಷರಾದರು
ದುರ್ಜನರು ದುರ್ಮುಖದ ಬಿಗುಮಾನ ಬೀರುತ್ತ
ಆನಂದ ತೀರ್ಥರನು ನಿಂದಿಸಲು ತೊಡಗಿದರು
ಅವರವರ ಭಾವಕ್ಕೆ ತಕ್ಕಂಥ ವರ್ತನೆ! ॥ ೧೨ ॥
 
"ವಿಶ್ವಗುರು ಮಧ್ವರನು ನಿಂದಿಪುದು ಸಲ್ಲ"
ಎಂದು ಧಿಕ್ಕರಿಸುತ್ತ ದುರ್ಜನಕೆ ಶಿಕ್ಷೆಯನು
ಈಯಲೋಸುಗವೋ ಎಂದು
ಘನ ಘೋಷದ ಘೋರ ವೇಷದಲಿ ನಿಂದು
ಸಂಕ್ಷೋಭೆ, ಸಂರಂಭ, ಸಂತಾಪ ತೋರಿಸುತ
ಖಲದಮನನಂತೆ ಆ ಸಿಂಧುರಾಜನು ಬಂದ ॥ ೧೩ ॥
 
ಅಮಿತ ಸಮ್ಮೋದದಲಿ ಚಂಚಲವು ಆ ಸಿಂಧು
ಧೃತಗತಿಯ ಚಲನೆಯಲಿ ಗಂಭೀರ ದನಿಯಲ್ಲಿ
ಸ್ತುತಿಸಿ ಪಾಡುವ ಮಧುರ ಇಂಚರದ ತೆರದಲ್ಲಿ
ನೊರೆಯೆಂಬ ತಿಳಿನಗೆಯ ಮೃದುಮಧುರ ಲಾಸ್ಯದಲಿ
ತೆರೆಗಳೆಂಬುವ ತನ್ನ ಅವಯವಗಳಿಂದಲಿ
ಮಧ್ವರಿಗೆ ನಮಿಸುವ ಪರಿಯಲ್ಲಿ ತೋರಿತ್ತು ॥ ೧೪ ॥
 
ಸಿಂಧುರಾಜನ ಜೊತೆಗೆ ಆನಂದ ತೀರ್ಥರು
ಗಾಂಭೀರ್ಯ, ವಾಕ್ಕು, ಜಲಲೀಲೆಯಂತಹ
ವಿವಿಧ ಗುಣರತ್ನಗಳ ಒಡೆಯರು ತಾವಾಗಿ
ಈರ್ವರಾ ಒಡನಾಟ ಅತಿಯಾಗಿ ಶೋಭಿಸಿತು
ಮಧ್ವರಾ ಲಾವಣ್ಯ ಜನಕೆ ಅತಿ ಪ್ರಿಯವಹುದು
ಜಲಧಿಯ ಲವಣತ್ವ, ಜನಕೆ ಓಕರಿಕೆ ! ॥ ೧೫ ॥