This page has been fully proofread once and needs a second look.

ಪೂಜೆಯ ಸಮಯದಲಿ ಶ್ರೀಮದಾಚಾರ್ಯರು
ಹದಿನಾರು ಉಪಚಾರ, ಅರ್ಘ್ಯ ಪಾದ್ಯಾದಿಗಳನ್ನು
ಶಾರ್ಙ್ಞಪಾಣಿಗೆ ಸಲಿಸಿ ಆತನನು ಮೆಚ್ಚಿಸುತ
ದ್ವಾತ್ರಿಂಶದಪರಾಧ ದೋಷಗಳ ವರ್ಜಿಸುತ
ಪರಮಭಕ್ತಿಯಲವರು ಶ್ರೀಹರಿಯ ನರ್ಚಿಸುತ
ಸಲಿಸಿದರು ಆರು ಬಗೆ ಅನೂಪಚಾರಗಳ ॥ ೩೬ ॥
 
ದೇಹವೆಂಬುವ ತಮ್ಮ ದಿವ್ಯ ಮಂದಿರದಲ್ಲಿ
ಶ್ರದ್ಧೆಯೆಂಬುವ ದಿವ್ಯ ತೀರ್ಥವನು ಹರಿಸಿ
ಚಿತ್ತವೆಂಬುವ ದಿವ್ಯ ಜಲದಿಂದ ಅಭಿಷಿಕ್ತ
ಪದ್ಮರಾಗದ ಮಣಿಯ ಕಾಂತಿಯಲಿ ಕೂಡಿರುವ
ಹೃತ್ಸರೋಜದಲಿ ಆಸೀನನಾಗಿರುವ
ಶ್ರೀ ಹರಿಯ ಪೂಜಿಪರು ಭಾವಾಷ್ಟಪುಷ್ಪದಲಿ ॥ ೩೭ ॥
 
ಇಂತು ಆ ಶ್ರೀ ಹರಿಯ ಭಕ್ತಿಯಲಿ ಪೂಜಿಸಿ
ಭುಜಯುಗ್ಮಗಳಿಗೆಲ್ಲ ಸಾಂದ್ರ ಚಂದನ ಹಚ್ಚಿ
ಪರಿಮಳವ ಸೂಸುವ ಕಿರುನಗೆಯ ಮೊಗದಿಂದ
ಸ್ನಿಗ್ಧ ಕೌಶೇಯದ ವಸ್ತ್ರದಲಿ ಶೋಭಿಸುತ
ಮನುಜ, ಸುರ, ಮುನಿಗಳ ಕಂಗಳೌತಣವಾಗಿ
ಅತಿಶಯದಿ ಮೆರೆದರು ಆನಂದ ತೀರ್ಥರು ॥ ೩೮ ॥
 
ವೇದವಾದಿಗಳಲ್ಲಿ ಕೋವಿದರು ಮಧ್ವರು
ಶ್ರೀ ಹರಿಗೆ ಪೊಡಮಡುವ ಪರಮ ಭಕ್ತರು ಅವರು
"ಲೋಕನಿಯಮಕ್ಕೆಲ್ಲ ಆದೇಶ ನೀಡುವವ
ಶ್ರೀ ಹರಿಯು ಕರುಣಿಸಲಿ ಎಮಗೆ ಮಂಗಳವ"
ಎನ್ನುತಲಿ ಆ ಗುರುವು ಅಪ್ರಯಾಸದಿ ದೊರೆತ
ಪರಮಾನ್ನ ನೈವೇದ್ಯ ಭಕ್ತಿಯಲಿ ಭುಜಿಸಿದರು ॥ ೩೯ ॥