This page has been fully proofread once and needs a second look.

ಮಧ್ವಮುನಿಗಳ ಹಲವು ಯತಿಶ್ರೇಷ್ಠ ಶಿಷ್ಯರು
ಶಾಸ್ತ್ರದಲಿ ಸೂಚಿಸಿಹ ದಂತಕಾಷ್ಠಗಳಿಂದ
ದಂತಗಳಿಗೀಯುವರು ಧವಳ ಕಾಂತಿಯನು
ಕಲ್ಯಾಣಿಯಲಿ ಮಿಂದು ಶುದ್ಧಿಗೊಳ್ಳುವರು
ಈ ತೆರದ ಶ್ರೇಷ್ಠತಮ ಕರ್ಮದಾಚರಣೆಯಲಿ
ಗುರುಗಳಲಿ ನಿಷ್ಠೆಯನು ಸ್ಫುಟಗೊಳಿಸುತ್ತಿದ್ದರು ॥ ೮ ॥
 
ರಾತ್ರಿಯಲಿ ಗುರುಗಳು ಪವಡಿಸಿದ ಬಳಿಕವೇ
ಶಿಷ್ಯರೆಲ್ಲರೂ ತಮ್ಮ ಶಯ್ಯೆಗಳ ಸೇರುವರು
ಬೆಳಗಿನಲಿ ಗುರುಗಳಿಗೆ ಮುಂಚಿತವೇ ಎಚ್ಚೆತ್ತು
ಮರುದಿನದ ರಾತ್ರಿಯ ಮಧ್ಯದ ವರೆಗೂ
ಸಂತೋಷ ಚಿತ್ತದಲಿ ಗುರುಸೇವೆ ಮಾಡುವರು
ಇಲ್ಲದಿರೆ ಶಿಷ್ಯರಿಗೆ ಸದ್ಗತಿಯು ಲಭಿಸುವುದೆ ? ॥ ೯ ॥
 
ಹಿಂದಿನ ರಾತ್ರಿಯಲಿ ಶ್ರವಣ ಮನನಗಳಿಂದ
ಬಹುವಾಗಿ ದಣಿದಿದ್ದ ಹೊಸ ಶಿಷ್ಯನೊಬ್ಬ
ರಾತ್ರಿಯಲಿ ಸರಿಯಾಗಿ ನಿದ್ರಿಸದೆ ಆತ
ಬೆಳಗಿನ ಮಂಪರಲಿ ಪರಮ ಪರವಶನಾದ
ತನಗಿಂತಲೂ ಮೊದಲು ಗುರುವು ಹೊರಟುದ ಕಂಡು
ಆ ಶಿಷ್ಯ ಬಹುವಾಗಿ ಪರಿತಾಪ ಪಟ್ಟ ॥ ೧೦ ॥
 
"ನಮಗಿಂತಲೂ ಮೊದಲು ನೀವೇಳಲಿಲ್ಲ
ನಿಮ್ಮ ಪಾಲಿನ ಕೆಲಸ ನಿರ್ವಹಿಸಲಿಲ್ಲ"
ಎಂದೆಲ್ಲ ಗುರುಗಳು ಆರೋಪಿಸುವರೆಂಬ
ಶಂಕೆಯನು ತಾಳುತ್ತ ಹಲವಾರು ಶಿಷ್ಯರು
ನಮ್ರಭಾವದಿ ನಿಂತು, ದಾರಿಗಡ್ಡವ ಬಿಟ್ಟು
ನೀರೊಳಗೆ ಇಳಿಯದೆಯೆ ಪ್ರವಚನವ ಕೇಳಿದರು ॥ ೧೧ ॥