This page has been fully proofread once and needs a second look.

"ಪರಿಶುದ್ಧ ಮನಸಿನ ಜಯಸಿಂಹ ನೃಪ ಕೇಳು
ಆನಂದ ತೀರ್ಥರ ಶ್ರೀಪಾದ ರೇಣು
ಪರಮಪಾವನ ಪೂಜ್ಯ, ಸುಜನ ಶಿರೋಧಾರ್ಯ
ಇದ ಭಜಿಪ ಸುಜನರಿಗೆ ಇಂದ್ರಪದ ಲಭಿಸುವುದು
ಅದೃಷ್ಟ ಹೀನರಿಗೆ ದುರ್ಲಭವು ಇದಹುದು
ಈ ಪಾದಧೂಳಿಯು ಕರುಣಿಸಲಿ ಮಂಗಳವ" ॥ ೪ ॥
 
"ಪರಿಚಯವೇ ಇಲ್ಲದ ಕಾನನದಿ ಕೂಡ
ಭೃಂಗರಾಜನು ಪುಷ್ಪ ಮಕರಂದ ಅರಿತಂತೆ
ಪಂಡಿತೋತ್ತಮರಾದ ಆ ತ್ರಿವಿಕ್ರಮರು
ಅಪರಿಚಿತ ಮಧ್ವರ ಅಪರಿಚಿತ ಸದ್ಗುಣವ
ಒಮ್ಮೆಗೇ ಅರಿತರು ಸ್ವಜ್ಞಾನ ಬಲದಿಂದ
ಇದರಲ್ಲಿ ಅಚ್ಚರಿಯು ಲವಲೇಶವೂ ಇಲ್ಲ ॥ ೫ ॥
 
ಶ್ರೀ ಮಧ್ವಾಚಾರ್ಯರ ಆಹ್ನಿಕ ವರ್ಣನೆ
 
ಖಳಕುಲಕೆ ದ್ವೇಷದ ದೋಷವನು ಹೆಚ್ಚಿಸುತ
ಮಧ್ಯಮರಿಗೆಲ್ಲರಿಗೂ ಕೌತುಕವ ಹುಟ್ಟಿಸುತ
ಮುಕುತಿಪದ ಯೋಗ್ಯರಿಗೆ ಐಸಿರಿಯ ನೀಡುತ್ತ
ನಾಲ್ಕು ತಿಂಗಳ ವ್ರತವ ನಿಷ್ಠೆಯಲಿ ಮಾಡುತ್ತ
ಶ್ರೀ ಪೂರ್ಣಪ್ರಜ್ಞರು ವಿಷ್ಣು ಮಂಗಲದಲ್ಲಿ
ಹಲವು ರಾತ್ರಿಗಳನ್ನು ಸಂಭ್ರಮದಿ ಕಳೆದರು ॥ ೬ ॥
 
ವಿಹಿತ ಕರ್ಮಗಳನ್ನು ಬಲ್ಲ ಜನರಲ್ಲಿ
ಮಧ್ವಮುನಿ ಉತ್ತಮರು, ಎಲ್ಲರೊಳು ಶ್ರೇಷ್ಠರು
ಬ್ರಾಹ್ಮೀ ಮುಹೂರ್ತದಲಿ ನಿದ್ದೆಯಿಂದೇಳುತ
ಸ್ನಾನಾದಿ ಕಾರ್ಯಗಳ ವಿಹಿತದಲಿ ಮುಗಿಸಿ
ಅರುಣ ಯವನಿಕೆಯೊಳಗೆ ಯೋಗ್ಯ ಯೋಗಾಸನದಿ
ನಾರಾಯಣ ಎಂಬ ಬ್ರಹ್ಮನನು ಸ್ಮರಿಸಿದರು ॥ ೭ ॥