This page has been fully proofread once and needs a second look.

"ಒದಗಿಹುದು ಅವಕಾಶ ವಿಧಿಯ ಬಲದಿಂದೊಂದು
ಮಧ್ವಮುನಿಯೆಂಬುವ ಪ್ರತಿವಾದಿ ಗಜವನ್ನು
ಕೂಡಲೇ ಎದುರಿಸಿರಿ ನಿಮ್ಮೆಲ್ಲ ಬಲದಿಂದ
ಸ್ವಜನ ವೃಂದಕೆ ಬಂದ ಭಯವನ್ನು ಪರಿಹರಿಸಿ
ಚಂದ್ರಮನ ತೆರದಲ್ಲಿ ಧವಳ ಕೀರ್ತಿಯ ಗಳಿಸಿ
ನಿಮ್ಮಲ್ಲಿ ಆಶ್ರಯವ ಬೇಡುವೆವು ನಾವಿಂದು" ॥ ೬೪ ॥
 
ಮಾಯಿಜನರಿಂದಿಂಥ ಪ್ರಾರ್ಥನೆಯ ಕೇಳಿ
ಪೇಚಿನಲಿ ಸಿಲುಕಿದರು ಪಂಡಿತಾಚಾರ್ಯರು
ತಮ್ಮದೇ ಜನರೆಂಬ ಒಂದು ಕಾರಣದಿಂದ
ಅನುಕೂಲಕರವಾದ ಮಾತುಗಳನಾಡಿದರು
ಸಂಶಯವ ಪರಿಹರಿಪ ಸಾಮರ್ಥ್ಯವುಳ್ಳವರು
ಮಧ್ವರನು ಜಯಿಪುದಕೆ ಸಂಶಯವ ತಳೆದರು ॥ ೬೫ ॥
 
ಮಧ್ವ ವಚನಗಳೆಂಬ ತೀಕ್ಷ್ಣ ಅಂಕುಶವನ್ನು
ಬಲವಾಗಿ ತಿವಿಯುವ ಕೆಲ ಮಧ್ವಶಿಷ್ಯರನು
ಖೇದಗೊಳಿಸುತ ಅಟ್ಟಿ ಆ ತ್ರಿವಿಕ್ರಮರು
ಮುನಿದೆದ್ದ ಮದ್ದಾನೆ ತೆರದಲ್ಲಿ ಓಡುತ್ತ
ವಿವಿಧ ಉತ್ತರವೆಂಬ ಧೂಳಿಯನು ಎರಚುತ್ತ
ಕುರುಡರನ್ನಾಗಿಸಿತು ಆ ಮಧ್ವ ಶಿಷ್ಯರನು ॥ ೬೬ ॥
 
ತ್ರಿವಿಕ್ರಮ ಪಂಡಿತರಿಂದ ಮಧ್ವಗ್ರಂಥಗಳ ಅಧ್ಯಯನ
 
ಅತಿ ವಿವೇಕಿಗಳವರು, ಪಂಡಿತಾಚಾರ್ಯರು
ರಾತ್ರಿಯ ಕಾಲದಲಿ ಅತಿ ಗೋಪ್ಯವಾಗಿ
ಆನಂದ ತೀರ್ಥರ ಗ್ರಂಥ ಸಮುದಾಯವನು
ಸೂಕ್ಷ್ಮಾವಲೋಕನದಿ ಅಧ್ಯಯನ ಮಾಡಿದರು
ಮಧ್ವಮುನಿ ಮಂಡಿಸಿದ ಶಾಸ್ತ್ರ ಸಾರವ ಕಂಡು
ವಿಸ್ಮಯವ ತಳೆದರು ತಮ್ಮ ಮನದಲ್ಲಿ ॥ ೬೭ ॥