This page has been fully proofread once and needs a second look.

"ಮಾಯಾವಾದವದು ದುರ್ಗಮದ ಕಾನನವು
ಭಾಟ್ಟ ಮೀಮಾಂಸಕರು ಇದರಲ್ಲಿ ಭ್ರಷ್ಟರು
ಪ್ರಭಾಕರನ ಪ್ರಭೆಯೆಲ್ಲ ಇದರಲ್ಲಿ ನಿಂದಿಹುದು
ಇದ ಕಂಡು ಬೌದ್ಧರು ಭೀತಿಗೊಂಡಿಹರು
ಇಂತಹ ಕಾನನವ ಸುಡಲು ಮುಂದಾಗಿರುವ
ತತ್ವವಾದಾಗ್ನಿಯನು ಕಡೆಗಣಿಸಬಹುದೆ ? ॥ ೮ ॥
 
"ನಮ್ಮ ನಾಯಕರಾದ ಶ್ರೀ ಪದ್ಮತೀರ್ಥರು
ಮಧ್ವ ಮುನಿಗಳು ಸೇರಿ ಹೊರ ಹೊರಟ ಸ್ಥಳದಿಂದ
ಮುನ್ನಡೆದು ಬರದಿರಲು ಪಣವ ತೊಟ್ಟಿದ್ದರು
ಆದರದು ಮಧ್ವರನು ತಡೆಯದೆ ಹೋಯ್ತು
ಮುನ್ನುಗ್ಗಿ ಮುನ್ನುಗ್ಗಿ ಬರುತಲೇ ಇಹರವರು
ಅಕಟಕಟ ! ನಾವೆಂಥ ನತದೃಷ್ಟರಾಗಿಹೆವು ! ॥ ೯ ॥
 
'ಪ್ರತಿವಾದಿ ಪ್ರಶ್ನೆಗೆ ಉತ್ತರವು ಸಿದ್ಧ
ಬೇರಾರೂ ಖಂಡಿಸಲು ಸಾಧ್ಯವಿಲ್ಲದ ಪ್ರಶ್ನೆ
ಮಧ್ವಮುನಿ ಬಿಡಿಸುವರು ಚತುರೋಕ್ತಿಯಿಂದ
ಪ್ರತಿವಾದಿ ಗುಂಪನ್ನು ಲಜ್ಜೆಗೊಳಪಡಿಸುವರು
ಇಂತಹ ಮಾತುಗಳು ಎಲ್ಲೆಲ್ಲೂ ಕೇಳುತಿವೆ
ನಾವೀಗ ಮಾಡುವುದು ಏನೆಂಬ ಅರಿವಿಲ್ಲ ॥ ೧೦ ॥
 
"ಸಪಾದ ಲಕ್ಷದ ಸಂಖ್ಯೆಗಳ ಶ್ಲೋಕಗಳು
ಅತಿ ಪುರಾತನವಹುದು ಈ ಮಾಯಾವಾದ
ಇಂತಹ ಶಾಸ್ತ್ರವನು ಆನಂದ ತೀರ್ಥರು
ಒಂದೆರಡು ವಾಕ್ಯದಲಿ ಖಂಡಿಸುತ್ತಿಹರು
ಇಂತೆಂಬ ಮಾತುಗಳ ಹೇಳುವರು ಪಾಂಥರು
ಇದರಿಂದ ನೊಂದಿರುವ ನಾ ಬಂದೆ ನಿಮ್ಮ ಬಳಿ ॥ ೧೧ ॥