This page has been fully proofread once and needs a second look.

ಶ್ರೀ ಗುರುಭ್ಯೋ ನಮಃ
ಹನ್ನೊಂದನೆಯ ಸರ್ಗ
 
ಶೇಷ ಸನಕಾದಿಗಳಿಂದ ಶ್ರೀ ಮಧ್ವ ಭಾಷ್ಯ ಶ್ರವಣ
 
ಆನಂದ ತೀರ್ಥರ ಪ್ರವಚನವು ಜನಜನಿತ
ಎಲ್ಲೆಲ್ಲೂ ಶ್ಲಾಘನೆ, ಭಕ್ತಿ, ಆದರಗಳು
ಪ್ರವಚನದ ಹಿರಿಮೆ ಸುರಲೋಕ ಸೇರಿತು
ಆದಿಶೇಷರ ಕೂಡೆ ಸನಕಾದಿ ಮುನಿಜನರು
ಪ್ರವಚನದ ಸಾರವನು ಹೀರಿ ಮುದಗೊಂಡವರು
ಇಳೆಯೊಳಗೆ ಮಿಂಚಂತೆ ಇಳಿದು ತೆರಳಿದರು ॥ ೧ ॥
 
ಸನಕಾದಿ ಮುನಿಗಳು ಅತಿ ವಿನಯ ಭೂಷಿತರು
ಜಾಜ್ವಲ್ಯ ಮಾನದ ತೇಜವನು ಹೊಂದಿರುವ
ಮಸ್ತಕ ಸಹಸ್ರದಲಿ ಶೋಭಿಸುತ್ತಿರುವ
ಆದಿಶೇಷರ ಕಂಡು ಸನಕಾದಿ ಮುನಿಗಳು
ಭಕ್ತಿಗೌರವದಿಂದ ಆ ದೇವನಿಗೆ ನಮಿಸುತ್ತ
ಬ್ರಹ್ಮ ಸೂತ್ರದ ಬಗ್ಗೆ ಇಂತೆಂದು ಕೇಳಿದರು ॥ ೨ ॥
 
"ನಾಗಲೋಕದ ಒಡೆಯ, ಓ, ಶೇಷದೇವ!
ಬ್ರಹ್ಮಸೂತ್ರದ ಭಾಷ್ಯ ಅತಿ ರಮ್ಯ ಕಾವ್ಯ
ತಮ್ಮಂಥ ವಿಬುಧರಿಗೆ ಅತ್ಯಂತ ಪೂಜ್ಯ
ಸಕಲ ಐಸಿರಿಯಿಂದ ತುಂಬಿ ತುಳುಕುತ್ತಿರುವ
ಆನಂದ ತೀರ್ಥರ ಈ ಮೇರು ಕೃತಿಯನ್ನು
ಅಡಿಗಡಿಗೆ ಪಠಿಸಿರಲು ಬರುವ ಫಲವೇನು ?" ॥ ೩ ॥