This page has been fully proofread once and needs a second look.

ಗರುಡ ಮಂತ್ರವ ಬಲ್ಲ ಶ್ರೇಷ್ಠ ಮಾನವನೊಬ್ಬ
ಮಂತ್ರದಲಿ ಹಾವುಗಳ ಸೆರೆ ಹಿಡಿವ ಹಾಗೆ
ಬಿರುನುಡಿಯ ಬಲದಿಂದ ಆನಂದ ತೀರ್ಥರು
ತಡೆಹಿಡಿದು ನಿಲಿಸಿದರು ತುರುಕ ಭಟರನ್ನು
ಮರಣ ಭಯವೆಂಬುವ ನದಿಯನ್ನೇ ಅಲ್ಲದೆ
ದೇವನದಿಯನು ಕೂಡ ಪರಿಜನರು ದಾಟಿದರು ॥ ೧೨ ॥
 
ತುರುಕ ಕಿಂಕರ ಸಂಖ್ಯೆ ಸಾವಿರದಲಿಹುದು
ಆದರೂ ಮಧ್ವಮುನಿ ನಿರ್ವಿಕಾರರು ಅಹುದು
ಜಗವೆಲ್ಲ ಸಲಹುವ ಮಾರುತನ ಅವತಾರ
ಕ್ರೂರ ಕಿಂಕರರ ಭಯ ಅವರಿಗೇಕೆ ?
ನರಿಗಳ ಗುಂಪಿನಲಿ ಕೇಸರಿಯು ಇರುವಂತೆ
ಕಂಗೊಳಿಸಿ ಮೆರೆದರು ಆನಂದ ತೀರ್ಥರು ॥ ೧೩ ॥
 
ತುರುಕ ರಾಜನು ತನ್ನ ಸೌಧ ಶಿಖರದಿ ನಿಂತು
ತನ್ನ ನಗರಿಯ ಹೊಕ್ಕ ಆನಂದ ತೀರ್ಥರನು
ಎವೆ ಇಕ್ಕದೇ ನೋಡಿ ಆಶ್ಚರ್ಯಗೊಂಡನು
ಏನಿವರ ಸೌಷ್ಠವ ! ಏನಿದೀ ಮೈಮಾಟ !
ದೇವ ದಾನವರಿಂದ ನಡುಗಿಸಲಸಾಧ್ಯ !
ಆ ನೃಪತಿ ಮಧ್ವರನು ಕುರಿತು ಇಂತೆಂದನು ॥ ೧೪ ॥
 
"ಹಾದಿಹೋಕರು ಎಲ್ಲ ಬೇಹುಗಾರರು ಎಂಬ
ಶಂಕೆಯಿಂದಲಿ ನಮ್ಮ ರಾಜ ಭಟರೆಲ್ಲ
ಪಥಿಕರಿಗೆ ಕಿರುಕುಳವ ಕೊಡುತಲಿರಬಹುದು
ಪಥಿಕ ಪಾಟನ ಕರ್ಮ ದೀಕ್ಷಿತರು ಅವರಹುದು
ಕಾಲದೂತರ ತರಹ ಕರುಣೆಯೇ ಇರದವರು
ಅವರಿಂದ ಪಾರಾಗಿ ಹೇಗೆ ಬಂದಿರಿ ತಾವು ? ॥ ೧೫ ॥