This page has been fully proofread once and needs a second look.

ಆಶ್ರಮದ ದ್ವಿಜರಿಗೆ, ಪಂಡಿತೋತ್ತಮರಿಗೆ
ವೇದಗಳ ಗೌಪ್ಯವನು ಭೇದಿಸುವ ತವಕ
ನೀರ ಒರತೆಗೆ ಕಾಯ್ವ ಬಾವಿಗಳ ತರಹ
ಅವರ ಮನದಾಳದಲಿ ಹತ್ತಾರು ಸಂದೇಹ
ನೂರಾರು ಪ್ರಶ್ನೆಗಳ ನೂರಾರು ಬಾವಿಗಳ
ಒಮ್ಮೆಲೇ ತುಂಬುವುದು ವ್ಯಾಸವಾಣಿಯ ಗಂಗೆ ॥ ೪೦ ॥
 
"ಕಣ್ಮನಕೆ ಮುದವೀವ ವ್ಯಾಸಮುನಿಗಳ ನೋಟ !
ಅವರ ಆ ನೇತ್ರಗಳು ಕಮಲ ಪುಷ್ಪಗಳಂತೆ
ಜಗಕೆಲ್ಲ ನೀಡುವುವು ಸಂತಸದ ಸುಧೆಯನ್ನು
ಮಂದಹಾಸವು ಬೆರೆತ ಆ ದಿವ್ಯ ನೋಟವದು
ಲಾಲಿಪುದು ಬರಸೆಳೆದು ಬಿಗಿಯ ಬಂಧನದಿಂದ
ಪೂರ್ಣಗೊಳಿಪುದು ಎನ್ನ ಮನದ ಆಕಾಂಕ್ಷೆಯನು ॥ ೪೧ ॥
 
" ಎನ್ನ ಈ ಸ್ಥಾನವನು ಅಪಹರಿಪ ಸಂಚಿನಲಿ
ಕಮಲವೇ ಮೊದಲಾದ ಇತರ ಪುಷ್ಪಗಳೆಲ್ಲ
ಮತ್ಸರವ ಸೂಸುತ್ತ ಸನ್ನಾಹ ನಡೆಸಿವೆ
ಇಂತು ಶ್ರೀ ಹರಿಯಲ್ಲಿ ಮೊರೆ ಇಡುತಲಿಹುದೋ
ಎಂಬಂತೆ ತೋರುತಿದೆ ಆ ತುಲಸಿ ದಲವು
ಕಿವಿಗಳಲಿ ಕಂಗೊಳಿಪ ಆ ಕರ್ಣ ಭೂಷಣವು " ॥ ೪೨ ॥
 
"ಜಗಕೆಲ್ಲ ಒಡೆಯರು, ಶ್ರೀ ವೇದವ್ಯಾಸರು
ಅವರ ಆ ಭ್ರೂಲಾಸ್ಯ, ಎಂತಹ ಸ್ವಾರಸ್ಯ!
ಬ್ರಹ್ಮ ರುದ್ರರ ಸಹಿತ ಎಲ್ಲ ದೇವರ ಕ್ರಿಯೆಯು
ಸಕಲ ಜನ ಸಂಪದವು, ಉತ್ಪತ್ತಿ, ನಾಶವು
ಎಲ್ಲವೂ ಜರುಗುವುವು ಈ ಲಾಸ್ಯದಿಂದ
ಸಕಲ ಭುವನದ ಕಾರ್ಯಕಾರಣವು ಈ ಲಾಸ್ಯ " ॥ ೪೩ ॥