This page has not been fully proofread.

ಅಚ್ಯುತನ ಆಲಯ, ವೈಕುಂಠದಂತೆ
ವೈಭವದ ಮೆರೆದಿತ್ತು ಬದರಿಕಾಶ್ರಮವು
ಎಲ್ಲೆಲ್ಲೂ ನೆರೆದಿರುವ ಭೂಸುರರ ಗಡಣ!
ಸಕಲ ಮನದಭಿಲಾಶೆ ಪೂರೈಸುವಾ ತಾಣ!
ದ್ವೇಷ ಮತ್ಸರವನ್ನು ಕಿತ್ತೆಸೆದ ಸಜ್ಜನರು !
ಅಲ್ಪರಿಗೆ ದುರ್ಗಮವು ಈ ರಮ್ಯ ತಾಣ!
 
ಶ್ರೀ ಮಧ್ವರ ವ್ಯಾಸಾಶ್ರಮ ಪ್ರವೇಶ, ಶ್ರೀ ಮಧ್ವ ವರ್ಣನ
 
ಭೂಲೋಕದಲ್ಲಿ ಪರಮ ಪಾವನ ಕ್ಷೇತ್ರ!
ಅತ್ಯಂತ ಆನಂದ, ಭಕ್ತಿಯಲಿ ನಲಿಯುತ್ತ
ಆಶ್ರಮವ ಹೊಕ್ಕರು ಆನಂದ ತೀರ್ಥರು
ಮೂವತ್ತು ಮತ್ತೆರಡು ಲಕ್ಷಣಗಳಿಂದ
ಕಂಗೊಳಿಸಿ ಮೆರೆದಿದ್ದ ಆಚಾರ್ಯ ಮಧ್ವರನು
ಕಂಡ ಆ ಬ್ರಾಹ್ಮಣರು ಚಿಂತಿಸಿದರಿಂತೆಂದು
 
"ಯಾರಿವರು ಈ ವ್ಯಕ್ತಿ? ಎಂಥ ಸಲ್ಲಕ್ಷಣವು !
ಕನಕದಿಂದಾಕುಲಿತ ತಾಲವೃಕ್ಷದ ನಿಲುವು !
ಕಮಲಪುಷ್ಪದ ಪರಿಯ ಆ ಬೊಗಸೆಗಂಗಳು !
ಪೂರ್ಣಚಂದ್ರನ ತೆರದ ಆ ಮುಖದ ವರ್ಚಸ್ಸು !
ಗಜರಾಜನ ಪರಿಯ ಗಂಭೀರ ನಡಿಗೆಯದು !
ಯಾರು ಇರಬಹುದಿವರು ? ಇಲ್ಲಿ ಬಂದವರು ?
 
"ಅತಿ ಶಾಂತ ಕಾಯವನು ಪಡೆದಿಹನು ಚಂದ್ರಮನು
ರಾತ್ರಿಯಲ್ಲಿ ಮಾತ್ರವೇ ಬೆಳಗುವನು ಅವನು
ಹಾಗಿದ್ದರಿವರು ಚಂದ್ರಮನು ಅಲ್ಲ
ಹಗಲಿನಲಿ ಪ್ರಜ್ವಲಿಪ ಸೂರನೂ ಇವರಲ್ಲ
ಪ್ರಖರ ತಾಪದ ಸುಳಿವು ಇವರೊಳಿಲ್ಲ
ಉಪಮಾನವಿಲ್ಲದಿಹ ಸದ್ಗುಣಾರ್ಣವರಿವರು !
 
108 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
5
 
6
 
7