This page has been fully proofread once and needs a second look.

"ಆನಂದ ತೀರ್ಥರದು ಬಹು ಭವ್ಯ ಆಕೃತಿ
ಸಕಲ ಸಲ್ಲಕ್ಷಣದಿಂದ ಸಂಪನ್ನ ದೇಹ
ಪ್ರಾಜ್ಞ, ಪ್ರಭೃತಿಗಳಿಗೆ ಸರಿಯಾದ ಲಕ್ಷಣ"
ಎಂದು ಹೊಗಳಲು ಅಲ್ಲಿ ನೆರೆದಿದ್ದ ಬಲ್ಲ ಜನ
"ಸಂಕರ" ನ ಕಿಂಕರರು ಮತ್ತೇನೂ ಅರಿಯದಲೆ
ಅಧಿಕ ಗಾತ್ರದ ಅವನ ಪೃಷ್ಠವನೆ ಹೊಗಳಿದರು ॥ ೪೦ ॥
 
"ಪೃಷ್ಠಭಾಗದ ಗಾತ್ರ ಮಿತಿಯೊಳಗೆ ಇರಬೇಕು
ಲಕ್ಷಣದ ಶಾಸ್ತ್ರಗಳು ಸಾರುತಿದೆ ಹೀಗೆಂದು"
ಖತಿಗೊಂಡ ಸಂಕರನು ಈ ಮಾತ ಕೇಳಿ
ಪಣ ತೊಟ್ಟ ಖಂಡಿಸಲು ಆಚಾರ್ಯ ದಂಡವನು
ಅವನ ಸಾಮರ್ಥ್ಯಕ್ಕೆ ಸರಿಯಾದ ಮಾತಲ್ಲ
ಆದರೂ ಇಂಥ ಹಟ ದುಷ್ಟರಿಗೆ ಸಹಜ ॥ ೪೧ ॥
 
ಕನ್ಯಾಕುಮಾರಿ, ರಾಮೇಶ್ವರ ಸಂದರ್ಶನ
 
ಕೇರಳದಿ ಹಲವಾರು ತೀರ್ಥದರ್ಶನ ಮಾಡಿ
ತೆರಳಿದರು ತ್ವರೆಯಿಂದ ಆನಂದ ತೀರ್ಥರು
ಕನ್ಯಕಾತೀರ್ಥದಲಿ ಸ್ನಾನವನು ಮಾಡಿ
ಸಮುದ್ರಸೇತುವನು ಸಂದರ್ಶಿಸಿದರು
ರಾಮೇಶ್ವರವೆಂಬೊಂದು ತೀರ್ಥಕ್ಷೇತ್ರವ ಸೇರಿ
ಶ್ರೀ ರಾಮನಾಥನಿಗೆ ಭಕ್ತಿಯಲ್ಲಿ ನಮಿಸಿದರು ॥ ೪೨ ॥
 
ಯತಿವೇಷ ಧಾರಿಯನು ಎದುರಾಗಿ ಕಂಡು
ದಂಡವನು ತೋರುತ್ತ ಆನಂದ ತೀರ್ಥರು
ನಗುನಗುತ ಆತನಿಗೆ ನುಡಿದರಿಂತೆಂದು
"ಕೋಪಿಷ್ಠ, ಗರ್ವಿಷ್ಠ, ಮಂದಮತಿಯವನೇ !
ನೀ ತೊಟ್ಟ ಪಣದಂತೆ ಮುರಿ, ಈ ದಂಡವ
ಇಲ್ಲದಿರೆ ನೀನೊಬ್ಬ ಷಂಡ, ಭಂಡ " ॥ ೪೩ ॥