This page has not been fully proofread.

ಸಂಗ್ರಹರಾಮಾಯಣ
 
೪೯
 
"ತಾಯಿ, ತಾತ ಏತಕ್ಕಾಗಿ ಅಳುತ್ತಿದ್ದಾನೆ? ನನ್ನಿಂದ ಏನಾದರೂ
ಪ್ರಮಾದ ನಡೆಯಿತೆ ? ನಿನ್ನ ಮೇಲೇನಾದರೂ ಕೋಪಗೊಂಡನೆ ? ಮಗನ
ಬಳಿ ಹೇಳಲಾರೆಯಾ?
 
ಮುಗುಳುನಗುತ್ತಲೆ ಕೈಕೇಯಿ ಉತ್ತರಿಸಿದಳು:
 
"ವತ್ಸಾ, ನಿನ್ನಿಂದಾಗಲಿ ನನ್ನಿಂದಾಗಲಿ ರಾಜನಿಗೆ ಕಣ್ಣೀರು ಬರಿಸುವ
ಯಾವ ತಪ್ಪು ನಡೆದಿಲ್ಲ. ಮಹಾರಾಜನಿಂದ ನಾನು ಪಡೆದ ವರಗಳನ್ನು ನಿನಗೆ
ತಿಳಿಸಲು ಸಂಕೋಚಗೊಂಡು ಆತ ಹೀಗೆ ಪರಿತಪಿಸುತ್ತಿದ್ದಾನೆ ಅಷ್ಟೆ. ನಿನ್ನ
ತಂದೆಯನ್ನು ಈ ಧರ್ಮಸಂಕಟದಿಂದ ಪಾರುಗಾಣಿಸುವುದು ನಿನ್ನ ಧರ್ಮವಲ್ಲವೆ?
ಖಂಡಿತ ಪಾಲಿಸುವುದಾಗಿ ಮಾತುಕೊಟ್ಟರೆ ನಾನದನ್ನು ನಿನಗೆ ಹೇಳಬಲ್ಲೆ."
ಅದಕ್ಕೆ ರಾಮಚಂದ್ರನು ಧೈರ್ಯದಿಂದ ಉತ್ತರಿಸಿದನು:
 
"ತಂದೆಗೆ ಪ್ರಿಯವಾದುದನ್ನು ಏನನ್ನೂ ನಾನು ಮಾಡಬಲ್ಲೆ. ಕಾಲಕೂಟ
ವನ್ನು ಕುಡಿ ಎಂದರೆ ಬೆಂಕಿಯಲ್ಲಿ ಧುಮ್ಮಿಕ್ಕು ಎಂದರೆ ಅದಕ್ಕೂ ನಾನು
ಅಳಕುವವನಲ್ಲ. ತಂದೆಯನ್ನು ಸಮಾಧಾನಗೊಳಿಸಮ್ಮ, ತಂದೆ ನಿನಗಿತ್ತ
ವರಗಳನ್ನು ನೆರವೇರಿಸುವುದಾಗಿ ಇದೋ ಪ್ರತಿಜ್ಞೆಗೈಯುತ್ತಿದ್ದೇನೆ."
 
ಸಮಯವನ್ನು ಕಾದಿದ್ದ ಕೈಕೇಯಿ ಮೆಲ್ಲನೆ ಉಸುರಿದಳು:
"ಹಿಂದೆ ದೇವಾಸುರರ ಯುದ್ಧ ಕಾಲದಲ್ಲಿ ನಿನ್ನ ತಂದೆ ನನಗೆ ಎರಡು ವರ
ಗಳನ್ನು ಕೊಡುವುದಾಗಿ ಮಾತು ಕೊಟ್ಟಿದ್ದ. ಈಗ ಅದನ್ನು ಕೇಳುವ ಕಾಲ
ಬಂತು ಎಂತಲೆ ಕೇಳಿದೆ. ವರವನ್ನು ಕೊಟ್ಟರೂ ಮಹಾರಾಜ ತನ್ನ
ಸೌಜನ್ಯದಿಂದ ಅದನ್ನು ನಿನಗೆ ಹೇಳಲಾರದವನಾಗಿದ್ದಾನೆ. ಸಂಗತಿಯಷ್ಟೆ-
ನೀನು ಹದಿನಾಲ್ಕು ವರ್ಷ ಕಾಡಿನಲ್ಲಿ ವಾಸಿಸಬೇಕು. ನಿನ್ನ ಬದಲು ಭರತ
ರಾಜ್ಯದ ಉತ್ತರಾಧಿಕಾರಿಯಾಗಬೇಕು. ಇವು ಮಹಾರಾಜ ನನಗಿತ್ತ ವರಗಳು."
 
ಸ್ವಲ್ಪವೂ ವಿಚಲಿತನಾಗದೆ ರಾಮಚಂದ್ರ ಉತ್ತರಿಸಿದ:
 
"ಇದೋ ನಾನು ಆನಂದದಿಂದ ಕಾಡಿಗೆ ತೆರಳುತ್ತಿದ್ದೇನೆ. ದೂತರಿಂದ
ಬರಿಸಿ ಭರತನಿಗೆ ಯುವರಾಜ ಪದವಿಯನ್ನರ್ಪಿಸಿರಿ. ಇದಕ್ಕಿಂತ ಮಿಗಿಲಾದ
ಸಂತಸದ ಸುದ್ದಿ ಬೇರೊಂದಿರಲಾರದು. ಇದನ್ನರುಹಲು ನಮ್ಮ ತಂದೆ ಏಕೆ
ಸಂಕುಚಿತನಾಗಬೇಕಿತ್ತು ?"
 
ಕಪಟನಿಯಾದ ಕೈಕೇಯಿ ನುಡಿದಳು: