This page has not been fully proofread.

ಮಿಂಚಿನಬಳ್ಳಿ
 
ಮುಂಚಿತವಾಗಿ ತಮ್ಮ ಬರವನ್ನು ದೂತರಿಂದ ದಶರಥನು ತಿಳಿಯಪಡಿಸಿದನು.
ಸುಮಂತನು ರಥವನ್ನು ಸಜ್ಜುಗೊಳಿಸಿದನು.
 
ರಾಜವೈಭವದ ಸೇನೆ ಮುಂಬದಿಯಲ್ಲಿ ಹೊರಟು ನಿಂತಿತ್ತು. ಮಂತ್ರಿ
ಗಳು-ಬ್ರಾಹ್ಮಣರು- ಪಟ್ಟದರಸಿಯರು- ವಸಿಷ್ಠ ಮಹರ್ಷಿಗಳು ಇವರೆಲ್ಲರೊಡನೆ
ಮಹಾರಾಜ ದಶರಥನು ಮಿಥಿಲೆಗೆ ತೆರಳಿದನು.
 
ಮಹಾರಾಜನ ಬರವನ್ನು ದೂರದಲ್ಲಿಯೆ ಗಮನಿಸಿದ ಜನಕರಾಯನು
ಶತಾನಂದರೊಡನೆ ಎದುರ್ಗೊಂಡು, ವೈಭವದ ಸ್ವಾಗತವನ್ನು ಕೋರಿದನು.
ಸತ್ಕಾರವೆಲ್ಲ ನಡೆದಮೇಲೆ ಯೋಗಕ್ಷೇಮದೊಡನೆ ವಿಷಯದ ಪ್ರಸ್ತಾವವೂ
 
ಬಂತು.
 
"ಮಹಾರಾಜನನ್ನು ಕಂಡು ತುಂಬ ಸಂತೋಷವಾಯಿತು. ನಿಮ್ಮಂಥವರ
ದರ್ಶನ ಪ್ರಿಯವಾದರೂ ದುರ್ಲಭವಾಗಿದೆ. ರಘುವಂಶದ ರಾಜರೊಡನೆ ನಮ್ಮ
ಸಂಬಂಧ ಬೆಳೆವುದು ನಮಗೆ ಸಂತಸದ ಮಾತು. ಯಜ್ಞಕಾರ್ಯವು ಮುಗಿದ
ಮೇಲೆ ನನ್ನ ಕನ್ನೆಯರಾದ ಸೀತೋರ್ಮಿಲೆಯರನ್ನು ನಿಮ್ಮೆಲ್ಲರ ಒಪ್ಪಿಗೆಯಿದ್ದರೆ
ರಾಮ-ಲಕ್ಷ್ಮಣರಿಗೆ ಕೊಡುವುದೆಂದು ಬಯಸಿದ್ದೇನೆ."
 
ದಶರಥನ ಉತ್ತರ ಚುಟುಕು ಆದರೂ ಸಮಗ್ರವಾಗಿತ್ತು:
"ಕೊಡುಗೆಯಲ್ಲಿ ಕೊಳ್ಳುವವರ ಇಚ್ಛೆಗಿಂತಲೂ ಕೊಡುವವರ ಇಚ್ಛೆ
ಮೇಲಲ್ಲವೆ ? 'ಪ್ರತಿಗ್ರಹೋ ದಾತೃವಶಃ'. ಅಂತೂ ಈ ಮದುವೆಗೆ ನಾನು
ಸಂತೋಷದಿಂದ ಸಮ್ಮತಿಸಬಲ್ಲೆ. ಇದು ನಮಗೆ ಪ್ರಿಯವಾದ ಸಂಬಂಧ"
 
ಜನಕನ ತಮ್ಮನಾದ ಕುಶಧ್ವಜನೂ ಮದುವೆಯ ವಾರ್ತೆಯನ್ನು ದೂತ
ರಿಂದ ತಿಳಿದು ಮಿಥಿಲೆಗೆ ಹೊರಟು ಬಂದನು. ಕುಲಾಚಾರ್ಯರಾದ ವಸಿಷ್ಠ
ಮಿಶ್ರರು ಕುಲ ಪದ್ಧತಿಗಳನ್ನೆಲ್ಲ ನೆರವೇರಿಸಿದರು. ಇಕ್ಷಾಕು-ಮಾಂಧಾತೃ-
ಸಗರ-ಅಂಬರೀಷ-ರಘು-ಅಜರಂಥ ಹರಿಭಕ್ತರಾದ ಸಾರ್ವಭೌಮರನ್ನು ಪಡೆದ
ವರವಂಶವನ್ನು ಬಣ್ಣಿಸಿದರು.
 
ಮುನಿಗಳ ಅಪ್ಪಣೆಯಂತೆ ವಧೂವಂಶವನ್ನು ಜನಕನೇ ಬಣ್ಣಿಸಿದನು:
"ನಿಮಿ-ದೇವರಾತ-ಪ್ರಸ್ವರೋಮ ಮೊದಲಾದ ರಾಜರ್ಷಿಗಳ ವಂಶದಲ್ಲಿ
ಜನಿಸಿದ ಈ ಸೀರಧ್ವಜನು ತನ್ನ ಕನ್ನೆಯರನ್ನು ರಾಮ-ಲಕ್ಷ್ಮಣರಿಗೆ ವಾಗ್ದಾನ
ವಿತ್ತಿದ್ದಾನೆ."