This page has been fully proofread once and needs a second look.

ಯಕ್ಷನ ಮಗಳು, ಸುಂದಾಸುರನ ಮಡದಿ, ಮಾರೀಚನ ತಾಯಿ, ಅಗಸ್ತ್ಯನ ಶಾಪದಿಂದ ರಕ್ಕಸಿಯಾಗಿದ್ದಾಳೆ. ನಾವೆಲ್ಲ ಮನುಷ್ಯರು ಅವಳ ಆಹಾರ. ಓ ಅಲ್ಲಿ ನೋಡು, ಅವಳು ತಿಂದು ಬಿಸುಟ ಗೋ-ಬ್ರಾಹ್ಮಣರ ಎಲುಬಿನ ಹಂದರದ ರಾಶಿ ! ನಿನ್ನಂಥ ಹಸುಳೆ ನೋಡಬಾರದ ದೃಶ್ಯ-ಅಲ್ಲವೆ ?"
 
ಹೀಗೆಂದು ನುಡಿದು ಮೌನದಾಳಿದ ಮುನಿಯೊಡನೆ ರಾಮಚಂದ್ರನು ತಾಟಕೆಯ ನಾಡಾದ ಕಾಡನ್ನು ಪ್ರವೇಶಿ- ಸಿದನು. ಅವನು ಬಿಲ್ಲನ್ನು ಅಣಿಗೊಳಿಸುತ್ತಿದ್ದಂತೆ ಅದರ ಟಂಕಾರವು ತಾಟಕೆಯ ಕಿವಿಯನ್ನು ಮುಟ್ಟಿತು. ಬಿಲ್ಲಿನ ಬಿರುದನಿಗೆ ಬೆದರಿದ ಮಿಗಗಳೆಲ್ಲ ಮೂಲೆ ಮೂಲೆಯ ಗುಹೆಗಳನ್ನು ಸೇರಿಕೊಂಡವು. ತಾಟಕೆ ಮಾತ್ರ ತನ್ನ ಗುಹೆಯಿಂದ ಹೊರಬಿದ್ದು ಸದ್ದು ಬಂದೆಡೆಗೆ ಧಾವಿಸಿದಳು.
 
ಗುಹೆಯಂಥ ಬಾಯನ್ನು ತೆರೆದು ಹೂಂಕರಿಸುತ್ತಿರುವ ಮಹಾಕಾಯಳಾದ ತಾಟಕೆಯು ಇವರೆದುರು ಕಾಣಿಸಿ- ಕೊಂಡಳು ! ಈ ಭೂತಾಕಾರದ ರಕ್ಕಸಿಯ ಮುಂದೆಯೂ ರಾಮನು ನಿರ್ಭಯನಾಗಿ ಕದಲದೆ ನಿಂತಿದ್ದ. ಕೋಪ- ಗೊಂಡ ತಾಟಕೆ ಧೂಳಿನ ಮಳೆಯನ್ನು ರಾಮನ ಮೇಲೆ ಸುರಿದಳು. ಆ ಮೇಲೆ ಕಗ್ಗಲ್ಲಿನ ಸುರಿಮಳೆ ! ಇದನ್ನು ಕಂಡು ರಾಮ ಎರಡು ಬಾಣಗಳಿಂದ ಅವಳ ಎರಡು ತೋಳು- ಗಳನ್ನೂ ಕತ್ತರಿಸಿದ. ಲಕ್ಷ್ಮಣನು ಅವಳ ತುಟಿ-ಮೂಗು- ಗಳನ್ನು ಕತ್ತರಿಸಿದ. ಆಗ ಆಕೆ ಆಕಾಶದಲ್ಲಿ ಮಾಯವಾಗಿ ನಾನಾ ವಿಧವಾದ ಆಯುಧಗಳನ್ನೆಸೆಯತೊಡಗಿದಳು. ಆದರೂ ಹೆಣ್ಕೊಲೆಗೆ ಹಿಂಜರಿದು ರಾಮನು ನಿಂತೇ ಇದ್ದನು. ಅದನ್ನರಿತ ಮಹರ್ಷಿ ವಿಶ್ವಾಮಿತ್ರನು ರಾಮನನ್ನು ಪ್ರಚೋದಿಸಿದನು:
 
"ಚಿಂತಿಸಬೇಡ ವತ್ಸಾ, ಇದು ನಾರಿಯಲ್ಲ; ಸಜ್ಜನರನ್ನು ಪೀಡಿಸುವ ಮಾರಿ . ಧರ್ಮವನ್ನು ಹೊಲೆಗೆಡಿಸುವ ಪಿಶಾಚಿ, ಕೊಲ್ಲು-ಕೊಲ್ಲುಈ ಅನಿಷ್ಟವನ್ನು."
 
ಮುನಿ ವಚನವನ್ನಾಲಿಸಿದ ರಾಮಚಂದ್ರ ಕ್ಷಣ ಮಾತ್ರದಲ್ಲಿ ಅವಳನ್ನು ಶರಪಂಜರದಲ್ಲಿ ಬಂಧಿಸಿದನು. ಎದುರಾಗಿ ಓಡಿ ಬರುತ್ತಿರುವ ಈ ಡಾಕಿನಿಯ ಎದೆಯನ್ನು ಸೀಳಿ ನೆಲಕ್ಕೆ ಕೆಡವಿದಾಗ-ದೇವತೆಗಳು ಆಕಾಶದಲ್ಲಿ ಜಯಜಯ-
ಕಾರವನ್ನೆಸಗುತ್ತಿದ್ದರು. ಆನಂದದಿಂದ ಹೂಮಳೆಗರೆಯು- ತ್ತಿದ್ದರು.