This page has not been fully proofread.

೨೪೯
 
ಸಂಗ್ರಹರಾಮಾಯಣ
 
ಭಗವಂತನನ್ನು ನೆನೆದು ಯೋಗಬಲದಿಂದ ತನ್ನ ಮೂಲ ರೂಪವನ್ನು ಪಡೆ
ದನು. ಲಕ್ಷ್ಮಣನು ಹರಿಯ ಹಾಸುಗೆಯಾಗಿ ಹರಿದುಕೊಂಡು ಹೋದನು.
 
ಇತ್ತ ರಾಮಚಂದ್ರನು ಊರೆಲ್ಲ ಘೋಷಿಸಿದನು :
 
"ಯಾರಿಗಾದರೂ ಪರಮ ಪದವಿಯಾದ ಮೋಕ್ಷವನ್ನು ಪಡೆವ ಬಯಕೆ
ಯಿದ್ದರೆ ಅವರು ನನ್ಮಜತೆ ಬರಬಹುದು."
 
ಕೈವಲ್ಯನಾಥನಾದ ಶ್ರೀ ಹರಿಯೇ 'ಕೈವಲ್ಯಕ್ಕೆ ಬನ್ನಿ' ಎಂದು ಕರೆದಾಗ
ಯಾರು ಬೇಡವೆಂದಾರು ? ಸಂಸಾರದಲ್ಲಿ ತೊಳಲುವುದನ್ನೆ ಹಣೆಯಲ್ಲಿ ಬರೆದು
ಕೊಂಡು ಬಂದವರ ಹೊರತು ಉಳಿದವರೆಲ್ಲ ಭಗವಂತನೊಡನೆ ಮಹಾ-
ಯಾನಕ್ಕೆ ಅನುವಾದರು.
 
ರಾಮಚಂದ್ರನು ಕುಶನನ್ನು ಕೋಸಲೆಯ ಸಿಂಹಾಸನದಲ್ಲಿ ಕುಳ್ಳಿರಿಸಿ-
ದನು. ಲವ ಯುವರಾಜನಾದನು. ಕುಶಾವತಿಯಲ್ಲಿ ಕುಶನಿಗೂ ಶ್ರಾವಸ್ತಿ
ಯಲ್ಲಿ ಲವನಿಗೂ ಪ್ರತ್ಯೇಕ ಸೇನಾಬಲ ಕೋಶಬಲಗಳು ರಚಿತವಾದವು. ಬಿಲ್ಲು
ವಿದ್ಯೆಯನ್ನು ಬಲ್ಲವರೂ ಶಾಸ್ತ್ರಜ್ಞರೂ ಧಾರ್ಮಿಕರೂ ಆದ ಕುಶ-ಲವರು
ರಾಮರಾಜ್ಯದ ಉತ್ತರಾಧಿಕಾರಿಗಳಾದರು.
 
ರಾಮಚಂದ್ರನ ಮಹಾಪ್ರಸ್ಥಾನದ ವಾರ್ತೆ ಶತ್ರುಘ್ನನಿಗೂ ತಲುಪಿತು.
ಅವನು ಕೂಡಲೆ ತನ್ನ ಇಬ್ಬರು ಮಕ್ಕಳಲ್ಲಿ ಸುಬಾಹುವನ್ನು ಮಧುರೆಯಲ್ಲೂ
ಶತ್ರಾ ಘಾತಿಯನ್ನು ವೈದಿಶ ಎಂಬಲ್ಲ ಪಟ್ಟಗಟ್ಟಿ ತಾನೂ ಅಯೋಧ್ಯೆಗೆ
ತೆರಳಿದನು.
 
ಸುಗ್ರೀವನೂ ಅಂಗದನಿಗೆ ಪಟ್ಟಗಟ್ಟಿ ಸಪರಿವಾರನಾಗಿ ರಾಮನ ಬಳಿಗೆ
ಬಂದುಬಿಟ್ಟನು. ಈ ವಾರ್ತೆಯನ್ನು ಕೇಳಿ ವಿಭೀಷಣನೂ ಲಂಕೆಯನ್ನು
ಬಿಟ್ಟೋಡಿ ಬಂದಿದ್ದನು.
 
ಆದರೆ ವಿಭೀಷಣನು ರಾಮಚಂದ್ರನ ಜತೆಗೆ ಬರುವಂತಿಲ್ಲ. ಅವನು
ಭೂಮಿಯಲ್ಲಿ ಇದ್ದು ಸೇವೆ ಮಾಡುವುದು ಉಳಿದಿದೆ. ಈ ಮಾತನ್ನು ರಾಮ-
ಚಂದ್ರನೇ ಆಡಿ ತೋರಿಸಿದನು:
 
"ವಿಭೀಷಣ, ನೀನು ಕಲ್ಪಾಂತದ ವರೆಗೆ ನನ್ನ ಸೇವೆ ಮಾಡಿಕೊಂಡು
ಭೂಮಿಯಲ್ಲಿ ಇರಬೇಕು. ಲಂಕೆಯನ್ನು ಪಾಲಿಸುತ್ತಿರಬೇಕು. ನನ್ನ ಭಕ್ತಿಗೆ
ಸಾಕ್ಷಿಪುರುಷನಾಗಿ ನೀನು ಚಿರಜೀವಿಯಾಗಿರಬೇಕು."