This page has been fully proofread once and needs a second look.

ಎಂದು ಜನ ಕೊಂಡಾಡಿದರು. ರಾಮಚಂದ್ರನ ಮಂದಹಾಸವೇ ಅದಕ್ಕೆ ಉತ್ತರವಾಯಿತು.
 
ಸಾವಿರಾರು ಗೋವುಗಳನ್ನೂ ಅಪಾರವಾದ ಬೆಳ್ಳಿ-ಬಂಗಾರ ವನ್ನೂ ವಿಪ್ರರಿಗೆ ದಾನವಾಗಿ ರಾಮಚಂದ್ರನು ಕೊಟ್ಟನು. ಅಮೂಲ್ಯಗಳಾದ ಒಡವೆ ತೊಡವೆಗಳನ್ನು ರಾಮಚಂದ್ರನು ಸಂತಸದ ಕೊಡುಗೆಯಾಗಿ ಸೀತೆಗೆ ಒಪ್ಪಿಸಿದನು. ಹಾಗೆಯೇ ಕಪಿಗಳಿಗೂ ರಾಕ್ಷಸರಿಗೂ ಸಮೃದ್ಧವಾದ ಸಂಭಾವನೆ ದೊರಕಿತು.
 
ಸೀತೆಯ ಮೈತುಂಬ ಬಂಗಾರ, ನಿಸರ್ಗಸುಂದರಿಯಾದ ಆಕೆಗೆ ಬಂಗಾರಗಳಿಂದೇನು ? ಚಿನ್ನದಿಂದ ಆಕೆಗೆ ಚೆಲುವಲ್ಲ. ಅವಳಿಂದ ಚಿನ್ನಕ್ಕೆ ಚೆಲುವು. ಸೀತೆ ತಾನು ತೊಟ್ಟಿರುವ ಆಭರಣಗಳಲ್ಲಿ ಅತ್ಯುತ್ತಮವಾದ ಹಾರವೊಂದನ್ನು ಕೈಯಲ್ಲಿ ಹಿಡಿದುಕೊಂಡು ರಾಮಚಂದ್ರನೆಡೆಗೆ ದಿಟ್ಟಿಸಿದಳು.
 
ಒಮ್ಮೆ ತನ್ನೆಡೆಗೆ ಒಮ್ಮೆ ಸರದೆಡೆಗೆ ದೃಷ್ಟಿ ಬೀರಿ ನಸುನಗು- ತ್ತಿರುವ ಸೀತೆಯ ಇಂಗಿತ ರಾಮನಿಗೆ ತಿಳಿಯಿತು. ಅವನೂ ಜಾನಕಿ ಯೆಡೆಗೆ ಕುಡಿನೋಟವನ್ನು ಬೀರಿ ನುಡಿದನು:
 
" ಸಾಧ್ವಿ, ಬ್ರಹ್ಮಚರ್ಯಾದಿ ಸದ್ಗುಣಗಳಲ್ಲಿ , ಶಾಸ್ತ್ರ ಪಾಂಡಿತ್ಯ ದಲ್ಲಿ ಯಾರನ್ನು ಮೀರಿಸುವವ ಇನ್ನಿಲ್ಲವೋ ಅಂಥವನಿಗೆ ಈ ಸರವನ್ನು ಉಡುಗರೆಯಾಗಿ ಕೊಡು.
 
ಸುಂದರಿ, ಯಾರ ಪರಾಕ್ರಮ ನಿನಗೆ ಮೆಚ್ಚಿಗೆಯಾಗಿದೆಯೋ, ಯಾರ ಪರಾಕ್ರಮ ತ್ರಿಭುವನದಲ್ಲಿ ಅಪೂರ್ವವಾಗಿದೆಯೋ ಅಂಥವನು ಈ ಸರವನ್ನು ಪಡೆಯುವ ಭಾಗ್ಯಶಾಲಿಯಾಗಲಿ.
 
ಯಾರು ನನಗೆ ಹೆಚ್ಚು ಮೆಚ್ಚಿನವರು ಎಂದು ನೀನು ಬಲ್ಲೆ ಯೋ , ಯಾರ ಸಾಹಸ ಸೇವೆಗಳು ನಿನ್ನನ್ನು ಮೆಚ್ಚಿಸಿವೆಯೋ ಅಂಥ ಮಹಾನುಭಾವನಿಗೆ ಈ ಪ್ರೀತಿಯ ಉಪಹಾರ ದೊರೆಯಲಿ. "
 
ಸೀತೆ ಹನುಮಂತನೆಡೆಗೆ ನೋಡಿ ಮುಗುಳುನಕ್ಕಳು. ಇತರರಿಗೆ
ದುರ್ಲಭವಾದ ತಾಯಿಯ ಅನುಗ್ರಹದ ಹಾರ ಹನುಮಂತನ ಕತ್ತಿನಲ್ಲಿ ವಿರಾಜಿಸಿತು ! ಮಾರುತಿಯ ಎದೆಯಲ್ಲಿ ಇಳಿದುಬಂದ ಹಾರ ಹಿಮಶಿಖರದಿಂದ ಧುಮ್ಮಿಕ್ಕುವ ಭಾಗೀರಥಿಯಂತೆ ಕಾಣಿಸಿತು !