This page has been fully proofread once and needs a second look.

ಜತೆಗೆ ಗರ್ವವೂ ಭಗ್ನವಾಯಿತು. ಹತ್ತು ಬಾಯಿಗಳೂ ನೆತ್ತರನ್ನು ಕಾರಿದವು ! ಹತ್ತು ಕಾರಂಜಿಗಳು ಕೆನ್ನೀರನ್ನು ಚಿಮ್ಮಿದವು !
 
ಅಷ್ಟರಲ್ಲಿ ಪ್ರಾಣದೇವರ ಪುತ್ರನಾದ ಹನುಮಂತನು ಲಕ್ಷ್ಮಣನನ್ನು ಎತ್ತಿಕೊಂಡು ರಾಮಚಂದ್ರನ ಬಳಿಗೆ ತಂದನು. ಸರ್ವಶಕ್ತನಾದ ರಾಮದೇವನು ಶಕ್ತಿಯನ್ನು ಲಕ್ಷ್ಮಣನ ಮೈ ಯಿಂದ ಎಳೆದು ತೆಗೆದು ಗಾಯ ಮಾಸುವುದಕ್ಕಾಗಿ ಮತ್ತೊಮ್ಮೆ ಔಷಧಗಳನ್ನು ತರುವಂತೆ ಮಾರುತಿಗೆ ಆಜ್ಞಾಪಿಸಿದನು.
 
ಹನುಮಂತನು ವಾಯುವೇಗದಿಂದ ಹಾರಿ ಹಿಂದಿನಂತೆಯೇ ಗಂಧಮಾದನವನ್ನು ಹೊತ್ತು ತಂದನು. ಅದರ ಗಾಳಿ ಸೋಂಕಿ- ದುದೇ ತಡ ಲಕ್ಷ್ಮಣನು ಉಲ್ಲಸಿತನಾಗಿ ಎದ್ದು ಕುಳಿತನು. ರಾಮ ಚಂದ್ರನು ಸಂತಸದಿಂದ ಹನುಮಂತನನ್ನು ಅಪ್ಪಿಕೊಂಡನು. ಗಾಯಗೊಂಡು ಕೈ ಮುರಿದುಕೊಂಡು ಬಿದ್ದಿದ್ದ ಕಪಿಗಳೆಲ್ಲ ಎದ್ದು ಕುಳಿತರು.
 
ರಾಕ್ಷಸರ ದೇಹವನ್ನು ಮಾತ್ರ ಕಪಿಗಳು ಕೊಂದಕೂಡಲೆ ಸಮುದ್ರಕ್ಕೆ ಚೆಲ್ಲಿಬಿಡುತ್ತಿದ್ದರು. ರಾಮಚಂದ್ರನ ಆಜ್ಞೆ ಆ ತೆರ ನಾಗಿತ್ತು. ಅದರಿಂದ ಯಾವ ರಾಕ್ಷಸನಿಗೂ ಈ ಮದ್ದಿನ ಬಲದಿಂದ ಮತ್ತೆ ಬದುಕುವುದು ಸಾಧ್ಯವಾಗಲಿಲ್ಲ. ಕೆಲಸ ತೀರಿದ ಕೂಡಲೆ ಮಾರುತಿ ಮೊದಲಿನಂತೆಯೇ ಪರ್ವತವನ್ನು ನಿಂತಲ್ಲಿಂದಲೆ
ಅದರ ಜಾಗಕ್ಕೆ ಎಸೆದನು. ಅದು ಮೊದಲಿದ್ದಂತೆಯೇ ಗಕ್ಕನೆ ಕುಳಿತುಕೊಂಡಿತು.
 
ರಾಮನ ಧನುಸ್ಸಿನ ಟಂಕಾರ ಯುದ್ಧಾರಂಭದ ಓಂಕಾರವನ್ನು ಜಗತ್ತಿಗೇ ಸಾರಿತು. ರಾವಣನೂ ಬಿಲ್ಲಿಗೆ ಹೆದೆಯೇರಿಸಿ ಸಿದ್ಧನಾಗಿ ವಿಮಾನದ ಮೇಲೇರಿ ಬಂದನು.
 
ಬ್ರಹ್ಮ-ರುದ್ರಾದಿ ಸಕಲ ದೇವತೆಗಳೂ ಸಕಲ ಮುನಿಗಳೂ ಭಗವಂತನ ಲೀಲಾವತಾರದ ಉದ್ದೇಶವಾದ ಈ ಲೀಲಾನಾಟಕ ವನ್ನು ನೋಡಲು ಮುಗಿಲಿನಲ್ಲಿ ನೆರೆದರು.
 
ರಾವಣನು ವಿಮಾನದಲ್ಲಿದ್ದರೆ ರಾಮಚಂದ್ರನು ಬರಿ ನೆಲ ದಲ್ಲಿದ್ದಾನೆ. ಇಂದ್ರನಿಗೆ ಇದು ಸರಿದೋರಲಿಲ್ಲ. ನಮ್ಮ ಪ್ರಭು ನೆಲದಲ್ಲಿ ನಿಂತಿರಬಾರದು" ಎಂದಿತು ಅವನ ಮನಸ್ಸು. ಒಡನೆ ಅವನು ತನ್ನ ರಥವನ್ನೇ ಕಳಿಸಿಕೊಟ್ಟನು.