This page has been fully proofread once and needs a second look.

"ಮಹಾರಾಜ, ಯಾವ ಆಪತ್ತಿಗಾಗಿ ನನ್ನನ್ನು ಎಚ್ಚರಿಸ- ಬೇಕಾಯಿತು ? ಯಾವ ಲೋಕಪಾಲನನ್ನು ನಿನ್ನ ಕಾಲಬುಡ- ದಲ್ಲಿ ತಂದು ಕೆಡವಬೇಕು ? ಅಪ್ಪಣೆಯಾಗಬೇಕು."
 
"ಕುಂಭಕರ್ಣ ! ಲೋಕಪಾಲರಿಂದ ನಮಗೆ ಭಯವಿಲ್ಲ. ಸದ್ಯ ನಾವು ಹೆದರಬೇಕಾಗಿ ಬಂದದ್ದು ಮನುಷ್ಯರಿಂದ, ಮಂಗಗಳಿಂದ ! ರಾಮ-ಲಕ್ಷ್ಮಣರನ್ನು ತೀರಿಸುವ ಭಾರ ನಿನ್ನ ಮೇಲಿದೆ. ಅದಕ್ಕಾಗಿ ನಿನ್ನನ್ನು ಎಚ್ಚರಿಸಬೇಕಾಯಿತು."
 
ನೀತಿಮಂತನಾದ ಕುಂಭಕರ್ಣ ಅಣ್ಣನನ್ನು ವಿರೋಧಿಸಿ ನುಡಿದನು :
 
"ಮಹಾವೀರನಾದ ರಾಮನೊಡನೆ ಕದನಕ್ಕೆ ತೊಡಗಿದೆಯಾ ? ಮಾಡಬಾರದ ಕೆಲಸ ಮಾಡಿದಂತಾಯಿತು. ರಾಮನೊಡನೆ ಕಾದು ಬದುಕುವವರಿಲ್ಲ. ಬಲಿಷ್ಠರೊಡನೆ ಸಂಧಿ, ದುರ್ಬಲ- ರೊಡನೆ ಕದನ, ಸಮಬಲರೊಡನೆ ಔದಾಸೀನ್ಯ, ಇದು ರಾಜನೀತಿ, ಬಲಿಷ್ಠನಾದ ರಾಮಚಂದ್ರನೊಡನೆ ನೀನು ಹೂಡಿದ ಯುದ್ಧ ರಾಜನೀತಿಗೆ ಮಸಿ ಬಳೆದಿದೆ. ರಾಮನ ಒಂದು ಬಾಣ ಮೂರು ಲೋಕಗಳನ್ನು ದಹಿಸೀತು ! ಎಚ್ಚರಿಕೆ."
 
ರಾವಣನು ನಿಷ್ಠುರನಾಗಿಯೆ ಉತ್ತರಿಸಿದನು :
 
"ನಿನ್ನಂಥ ಬಂಧುಗಳನ್ನು ಪಡೆದ ರಾಜನ ಬಾಳು ಹಾಳು, ನಿಮ್ಮೆಲ್ಲರ ರಾಜನಾದ ನನ್ನ ರಕ್ಷಣೆಗೆ ಉಪಯೋಗವಾಗದ ನಿನ್ನ ಬಲ ಇದ್ದರೇನು ? ಇರದಿದ್ದರೇನು ? ಗುರುವಿನಂತಿರುವ ನಿನ್ನ ಒಡಹುಟ್ಟಿದ ಅಣ್ಣನನ್ನು ನಿಂದಿಸುವುದರಿಂದ ನಿನ್ನ ಮೂರ್ಖ- ತನವನ್ನು ಹೊರಗೆಡವುತ್ತಿರುವೆ."
 
ಈ ಮಾತು ಕುಂಭಕರ್ಣನಿಗೆ ನಾಟಿತು. ಕೂಡಲೆ ಅವನು ತನ್ನ ಶೂಲವನ್ನು ಕೊಡಹಿ ಎದ್ದುನಿಂತು ಗರ್ಜಿಸಿದನು :
 
"ಮಹಾರಾಜ, ನನ್ನ ಬಂಧುಗಳ ನಿಧನಕ್ಕೆ ಸರಿಯಾದ ಪ್ರತೀ- ಕಾರವನ್ನು ನಾನು ಮಾಡುವೆ. ಶತ್ರುವನ್ನು ಸೋಲಿಸಿ ನಿನ್ನನ್ನು ಸಂತೋಷಗೊಳಿಸಲು ನನ್ನ ಸರ್ವಶಕ್ತಿಯಿಂದ ಪ್ರಯತ್ನಿಸುತ್ತೇನೆ. ನೀನು ನಿಶ್ಚಿಂತನಾಗಬೇಕು. ನಾನು ಕೋಪಗೊಂಡೆನೆಂದರೆ ನನಗೆ ಮೂರು ಲೋಕಗಳು ಮೂರು ತುತ್ತು; ಸಪ್ತಸಾಗರಗಳು ಒಂದು ಗುಟುಕು."
 
ಮಹೋದರ ಮಧ್ಯದಲ್ಲಿ ತಡೆದು ವಿನಂತಿಸಿಕೊಂಡನು :