This page has not been fully proofread.

ಸಂಗ್ರಹರಾಮಾಯಣ
 
ಆಗ ಭಾಸಕರ್ಣ ಶೂಲವನ್ನೆಸೆದ. ಪ್ರಘಸ ಕತ್ತಿಯಂತೆ ಹರಿತವಾದ
ಲೋಹದಂಡವನ್ನೆಸೆದ. ಅವರಿಬ್ಬರ ಕತೆಯನ್ನೂ ಮುಗಿಸುವುದಕ್ಕೆ ಮಾರುತಿ
ಹೆಚ್ಚು ಹೊತ್ತನ್ನು ತೆಗೆದುಕೊಳ್ಳಲಿಲ್ಲ. ದುರ್ಧಷ್ರನೂ ಈ ನಾಲ್ವರ ಹಾದಿಯನ್ನೆ
 
ಹಿಡಿದನು.
 
೧೫೫
 
ಶತ್ರುಸೈನ್ಯವೇ ಹನಮಂತನಿಗೆ ಆಯುಧ. ಆನೆ-ಕುದುರೆಗಳನ್ನೊ- ರಥ
ಗಳೆನ್ನೊ ಎಸೆದು ಬಿಟ್ಟರೆ, ತಮ್ಮ ಜತೆಗೆ ಇನ್ನೂ ಅನೇಕ ಸೈನ್ಯ ಭಾಗವನ್ನು ಅವು
ಪುಡಿಮಾಡುತ್ತಿದ್ದು ವು. ಒಬ್ಬ ಸೈನಿಕನನ್ನು ಕೊಲ್ಲಲಿಕ್ಕೆ ಇನ್ನೊಬ್ಬ ಸೈನಿಕನೇ
ಆಯುಧ ! ಈ ಯುದ್ಧದಿಂದ ಪಾರಾಗುವುದುಂಟೆ ! ರಾವಣನ ಸೈನ್ಯದ
ಮೂರರಲ್ಲಿ ಒಂದಂಶ ಹನುಮಂತನಿಗೆ ಆಹುತಿಯಾಗಿತ್ತು. ರಾವಣನ ಸೇನೆ
ಮೊದಲ ಬಾರಿ ಸೋಲಿನ ರುಚಿಯನ್ನು ಕಂಡಿತು.
 
ಸೇನಾಪತಿಗಳು ಸತ್ತ ಸುದ್ದಿ ರಾವಣನಿಗೆ ತಲುಪಿತು. ಅವನ ಇಪ್ಪತ್ತು
ಕಣ್ಣುಗಳೂ ಒಮ್ಮೆಲೆ ತನ್ನ ಪ್ರೀತಿಯ ಪುತ್ರನಾದ ಅಕ್ಷಕುಮಾರನ ಕಡೆಗೆ
ಹೊರಳಿದವು. ಮಗನಿಗೆ ತಂದೆಯ ಭಾವದ ಅರಿವಾಯಿತು. ಅಸಂಖ್ಯ ಸೇನೆ
ಯೊಡನೆ ಅವನು ಯುದ್ಧಕ್ಕೆ ಹೊರಟನು.
 
ಅಕ್ಷಕುಮಾರನು ಕಣ್ಣಿನಿಂದ ಕಿಡಿ ಕಾರುತ್ತಲೆ ನಗರದ ಬಾಗಿಲಿಗೆ
ಬಂದನು. ಹನುಮಂತನು ಮುಗಿಲಿಗೆ ಹಾರಿದನು. ಅಕ್ಷನ ಬಾಣಗಳಿಂದ
ಮುಗಿಲು ಮುಚ್ಚಿ ಹೋಯಿತು. ಅವುಗಳಲ್ಲಿ ಒಂದೂ ಹನಮಂತನಿಗೆ ತಾಗಿರಲಿಲ್ಲ.
ಅವನು ಗಾಳಿಯಂತೆ ಆಕಾಶದಲ್ಲಿ ಅಲೆಯುತ್ತಿದ್ದ. ಯುದ್ಧ ಸಾಗುತ್ತಲೇ ಇತ್ತು.
ಒಮ್ಮೆಲೆ ಹನುಮಂತನು ಅಕ್ಷನ ಎದುರು ಕಾಣಿಸಿಕೊಂಡನು. ರಾವಣನಷ್ಟೇ
ಬಲಿಷ್ಟನಾದ ಈತನನ್ನು ತೀರಿಸಿ ಬಿಡಬೇಕು ಎನ್ನಿಸಿತ್ತು ಹನುಮಂತನಿಗೆ ಆತನ
ಒಂದು ಪೆಟ್ಟಿಗೆ ರಥ ಮುರಿದು ಬಿತ್ತು; ಕುದುರೆಗಳು ಸತ್ತು ಬಿದ್ದವು. ಅಕ್ಷನು
ವಿರಥನಾದರೂ ಧೃತಿಗೆಡದೆ ಖಡ್ಗವನ್ನೆತ್ತಿ ಹಿಡಿದು ಆಕಾಶಕ್ಕೆ ನೆಗೆದನು.
ಹನುಮಂತನು ಅವನನ್ನು ಕಾಲುಗಳಲ್ಲಿ ಬಿಗಿಯಾಗಿ ಹಿಡಿದು ಆಕಾಶದಲ್ಲಿ
ಗರಗರನೆ ತಿರುಗಿಸಿ ನೆಲಕ್ಕೆಸೆದು ಬಿಟ್ಟನು. ಬರಿದಾದ ದೇಹ ಮಾತ್ರ ನೆಲಕ್ಕೆ
ಕುಸಿದುಬಿತ್ತು. ದೇವತೆಗಳು ಹನುಮಂತನ ಮೇಲೆ ಹೂಮಳೆಗರೆದರು.
ರಾವಣನಿಗೆ ದಿಕ್ಕೇ ತೋಚದಂತಾಯಿತು. ಲಂಕೆಯ ಮನೆಗಳಲ್ಲಿ ಜನ ಕಣ್ಣೀರು
ಸುರಿಸಿದರು. ಅಕ್ಷಕುಮಾರ ಇನ್ನಿಲ್ಲ.