This page has not been fully proofread.

ಮಿಂಚಿನಬಳ್ಳಿ
 
ಕಂಡಾಗಲೇ ಹನುಮಂತನಿಗೆ ಅನ್ನಿಸಿತ್ತು: "ಇವನೇ ಜಗನ್ಮಾತೆಯನ್ನು ಕದ್ದ
ಮೂರ್ಖ." ಹನುಮಂತನು ಬಳಿಸಾರಿ ಕಣ್ಣರಳಿಸಿ ಪರೀಕ್ಷಿಸಿದನು. ಮಹಾ
ಶೇಷನಂತೆ ಅತ್ತಿತ್ತ ಹೊರಳಿದ ತೋಳುಗಳು. ಚಂದನ ಬಳಿದ ಉಬ್ಬಿದ ಎದೆ.
ವಿಜಯೋನ್ಮಾದದ ಮುಖಮುದ್ರೆ, ಅವನ ಬಳಿಯಲ್ಲಿ ಸಾಧಿ ಮಂಡೋದರಿ
ಪವಡಿಸಿದ್ದಳು. ಅವಳನ್ನು ಕಂಡು ಹನುಮಂತ ಒಂದು ಕ್ಷಣ ತಡೆದು ನಿಂತು
ಯೋಚಿಸತೊಡಗಿದನು: "ಇವಳು ಯಾರಿರಬಹುದು ? ದೇವತೆಯೋ ? ದಾನ
ವಿಯೋ ? ಕಾಮದೇವನ ಆಶಾಲತೆಯಂತೆ ಬಳುಕುವ ಈ ಸುಂದರಿ ಯಾರಿರ
ಬಹುದು ! ಏನಿದ್ದರೂ ಈಕೆ ಸೀತೆಯಂತೂ ಖಂಡಿತ ಅಲ್ಲ. ಯಾರಾದರೆ ನನ
ಗೇನು ?" ಎಂದುಕೊಂಡು ಮುಂದೆ ಸಾಗಿದನು. ಎಲ್ಲಿಗೆ ಹೋದರೂ ರಾಕ್ಷಸ
ಸ್ತ್ರೀಯರ ಕಾಮೋನ್ಮಾದವೇ ಬತ್ತಲೆ ಮೈಯೇ ಕಾಣಿಸಿತು ಹೊರತು ಜಗನ್ಮಾತೆ
ಕಣ್ಣಿಗೆ ಬೀಳಲಿಲ್ಲ. ಹನುಮಂತನು ಒಂದಂಗುಲವನ್ನೂ ಬಿಡದೆ ಶೋಧಿಸಿ
ದ್ದರೂ ಸೀತೆಯ ಪತ್ತೆಯಾಗಲಿಲ್ಲ. ಇದರಿಂದ ಮಾರುತಿಯೂ ಚಿಂತಾಕುಲ
ನಾಗಬೇಕಾಯಿತು :
 
೧೪೨
 
ಸೀತೆಯನ್ನು ಹುಡುಕುವುದು ನನ್ನಿಂದಾಗಲಿಲ್ಲ. ಕೆಲಸವೆಲ್ಲ ಕೆಟ್ಟು
ಹೋಯಿತು. ಮೂರುಲೋಕದ ಸುಂದರಿಯರ ಬತ್ತಲೆ ಮೈಯನ್ನು ನೋಡುವು
ದಕ್ಕಾಗಿ ನಾನು ಲಂಕೆಗೆ ಬಂದುದೆ ? ಕಾಮುಕತೆಯ ನಗ್ನ ನೃತ್ಯವನ್ನು
ಕಾಣುವುದಕ್ಕಾಗಿ ನಾನು ಇಲ್ಲಿಗೆ ಬಂದದೆ? ನೈಷ್ಠಿಕ ಬ್ರಹ್ಮಚಾರಿಯಾದ ನಾನು
ಮಾಡಬಾರದ ಕೆಲಸವನ್ನು ಮಾಡಿದೆ ! ಆದರೂ ನಾನು ಹೊತ್ತ ಕಾರ್ಯದ
ನಿರ್ವಹಣೆಗಾಗಿ ಇದನ್ನು ಮಾಡುವುದು ಅಗತ್ಯವಿತ್ತು. ಆತ್ಮ ನಿಗ್ರಹಿಯಾದ
ನನಗೆ ಇದರಿಂದ ಯಾವ ಲೇಪವೂ ಉಂಟಾಗದು. ಅದು ಬೇರೆ ಮಾತು.
 
ಬೆಂಕಿ ಮತ್ತು ಗಾಳಿ ಎಲ್ಲಿದ್ದರೂ ಪರಿಶುದ್ದವೆ. ಸೂರ್ಯನ ಬೆಳಕು
ಹೊಲಸನ್ನು ಮುಟ್ಟಿದರೂ ಪವಿತ್ರವೆ. ಆದರೆ ನಾನು ಬರಿಯ ಉಪ್ಪು ನೀರಿನ
ಕಡಲನ್ನಷ್ಟೇ ದಾಟಿದಂತಾಯಿತು; ಕರ್ತವ್ಯದ ಕಡಲು ನನ್ನಿಂದ ದಾಟಲಾಗಿಲ್ಲ.
ನೋಡಬಾರದ ಹೆಣ್ಣುಗಳನ್ನೆಲ್ಲ ನೋಡಿದೆ; ಆದರೆ ರಾಮಚಂದ್ರನ ರಮಣಿ-
ಯನ್ನು ನನ್ನ ತಾಯಿಯನ್ನು ನೋಡುವುದಾಗಲಿಲ್ಲ. ನಾನು ಇಲ್ಲಿಗೆ ಬಂದು
ಏನನ್ನು ಸಾಧಿಸಿದಂತಾಯಿತು ? ನನ್ನ ಮೇಲೆ ಆಸೆಯಿಟ್ಟು ಕಾದಿರುವ ಕಪಿ
ಗಳಿಗೆ ಯಾವ ಮೋರೆಯನ್ನು ತೋರಿಸಲಿ ? ರಾಮಚಂದ್ರನ ಬಳಿಗೆ ಹೋಗಿ
"ಸೀತೆಯನ್ನು ನೋಡಲಾಗಲಿಲ್ಲ" ಎಂದು ಯಾವ ಬಾಯಿಂದ ಹೇಳಲಿ ?