This page has not been fully proofread.

ಸಂಗ್ರಹರಾಮಾಯಣ
 
ವೈಭವದ ನೆಲೆಯಾದ, ಸಂಪದದ ಸೆಲೆಯಾದ ತನ್ನ ಅಂತಃಪುರವನ್ನು
ಸುಗ್ರೀವ ಪ್ರವೇಶಿಸಿದ. ಕಪಿಗಳೆ ಕಾಲಿಗೆರಗಿದರು. ಜಯಘೋಷವನ್ನೆಸಗಿ-
ದರು. ಮಂತ್ರಿಗಳ, ಮಾರುತಿಯ ಒಪ್ಪಿಗೆಯನ್ನು ಪಡೆದು ಸುಗ್ರೀವ ಅಭಿಷೇಕ-
ಕ್ಕಾಗಿ ಅಣಿಮಾಡಿದ ಅಟ್ಟವನ್ನೇರಿದನು. ಅನೇಕ ನದಿಗಳ ಪುಣ್ಯಸಲಿಲದಿಂದ
ಅಭಿಷೇಕಕಾರ್ಯ ವೈಭವವಾಗಿ ಜರುಗಿತು. ವಾದ್ಯಗಳು ಮೊಳಗಿದವು.
ದಕ್ಷಿಣೆಗಳಿಂದ ಬ್ರಾಹ್ಮಣರ ಮನೆಯೂ ಮನವೂ ತುಂಬಿತು. ಹರೆಯದ
ಹುಡುಗಿಯರ ನೃತ್ಯ ನೆರೆದವರ ಕಣ್ಮನ ಸೆಳೆಯಿತು. ದೀಪಗಳು ಬೆಳಗಿದವು.
ವನಿತೆಯರು ಅರಳು ಹೂಗಳನ್ನು ಚೆಲ್ಲಿದರು, ಸುಗ್ರೀವನು ಸಿಂಹಾಸನವನ್ನೇರಿ-
ದನು. ಮಾರುತಿಯ ಆದೇಶದಂತೆ ಗಜ, ಗವಾಕ್ಷ, ಗವಯ, ಶರಭ, ಗಂಧ-
ಮಾದನ, ನೀಲ, ಮೈಂದ, ವಿವಿದ, ಸುಷೇಣ, ಜಾಂಬವಂತ ಮೊದಲಾದವರೆಲ್ಲ
ಸೂರ್ಯಪುತ್ರ ಸುಗ್ರೀವನಿಗೆ ಅಭಿಷೇಕಗೈದರು. ಪನಸನು ಬೆಳ್ಕೊಡೆಯನ್ನು
ಹಿಡಿದನು. ನಲನೂ ತಾರನೂ ಇಕ್ಕೆಲಗಳಲ್ಲಿ ಚಾಮರ ಬೀಸಿದರು. ರಾಮನ
ಆಜ್ಞೆಯಂತೆ ಸುಗ್ರೀವನು ಅಂಗದನಿಗೆ ಯುವರಾಜ ಪದವಿಯನ್ನೊಪ್ಪಿಸಿದನು.
ನೆರದವರೆಲ್ಲ ಸುಗ್ರೀವನನ್ನು ಕೊಂಡಾಡಿ ಹರಸಿದರು. ರಾಮನ ಅಪ್ಪಣೆಯಂತೆ
ಪಟ್ಟಣ ಪ್ರವೇಶ ನಡೆಯಿತು. ತಾರೆ-ರುಮೆಯರೊಡನೆ ಸುಗ್ರೀವನು ಕಿಂಧೆ-
ಯನ್ನು ಪ್ರವೇಶಿಸಿದನು.
 
೧೨೧
 
ವಾಲಿಯನ್ನು ಕೊಂದು ಸುಗ್ರೀವನಿಗೆ ಅನುಗ್ರಹಿಸಿದ ಕರುಣಾಳು ರಾಮ-
ಚಂದ್ರ ಮಾಲ್ಯವತ್ಪರ್ವತದ ಗುಹೆಗಳಲ್ಲಿ ಸುಖವಾಗಿ ಇರತೊಡಗಿದನು. ಹೂ-
ಹಣ್ಣುಗಳಿಂದ ತುಂಬಿದ ಗಿಡಬಳ್ಳಿಗಳು. ಅಲ್ಲಲ್ಲಿ ತಿಳಿನೀರಿನ ಕೊಳ್ಳಗಳು.
ಮೇಲವಾದ ಗಾಳಿ, ನಿಬಿಡವಾದ ಕಾಡಿನ ಗಾಂಭೀರ್ಯದ ನಡುವೆ ಸುಳಿಯುವ
ಸೊಂಪಿನ ಚಂದ್ರ. ಒಟ್ಟಿನಲ್ಲಿ ವಾತಾವರಣವೇ ಅತ್ಯಂತ ಮೋಹಕವಾಗಿತ್ತು.
ಮಡದಿಯನ್ನು ಕಳೆದುಕೊಂಡ ರಾಮಚಂದ್ರ ದುಃಖಿತರಂತೆ ಕಾಣಿಸಿಕೊಂಡನು.
ಪರಮಪುರುಷನಿಗೆ ದುಃಖವೆಲ್ಲಿಯದು ? ವಿರಹವೆಲ್ಲಿಯದು ? ಇದೆಲ್ಲ ಲೋಕ
ವಿಡಂಬನೆ. ಹೆಣ್ಣಿಗಾಗಿ ಮರುಗುವ ಜನರ ಪಾಡೆಂಥದು ಎಂದು ತೋರಿಸುವ
ಲೀಲಾ ನಾಟಕ ! ಅಸುರರಿಗೆ ಮೋಹದ ಬಲೆ ಬೀಸುವ ಬಗೆ ಅಷ್ಟೆ. ಯಾರ
ಪಾದ ಸ್ಮರಣೆಯಿಂದ ಸನಕಾದಿಮುನಿಗಳು ವಿಷಯ ಭೋಗವನ್ನು ತೃಣಕ್ಕಿಂತ
ಕಡೆಯಾಗಿ ಎಣಿಸುವರೋ ಅಂಥ ರಾಮಚಂದ್ರನಿಗೆ ವಿರಹ ಎಲ್ಲಿಂದ ತಟ್ಟಬೇಕು?