This page has not been fully proofread.

ಸಂಗ್ರಹರಾಮಾಯಣ
 
ಅಷ್ಟರಲ್ಲಿ ಬಳಲಿದಂತೆ ಭಾಸವಾಯಿತು. ಬಸವಳಿದ ಜಟಾಯುವಿನ ರೆಕ್ಕೆ-
ಗಳನ್ನೂ ಕಾಲುಗಳನ್ನೂ ರಾವಣನು ಕತ್ತರಿಸಿದನು. ಮಹಾವೀರನಾದ
ಜಟಾಯು ನೆಲಕ್ಕೆ ಕುಸಿದುಬಿದ್ದ. ಸೀತೆ ಆ ಮುದಿ-ದೇಹವನ್ನಪ್ಪಿ ಅತ್ತು
ಗೋಗರೆದಳು. ಬಲಾತ್ಕಾರವಾಗಿ ಅವಳನ್ನು ಸೆಳೆದುಕೊಂಡು ರಾವಣನು
ಆಕಾಶದಲ್ಲಿ ವಾಯುವೇಗದಿಂದ ಸಾಗಿದನು.
 
೧೦೧
 
ಬುಸುಗುಡುತ್ತಿರುವ ಹಾವಿನ ಮರಿಯಂತೆ, ಉರಿಯುತ್ತಿರುವ ಅಗ್ನಿ
ಶಿಖೆಯಂತೆ ಉದ್ವಿಗ್ನಳಾದ ಸೀತೆಯನ್ನು ತೊಡೆಯಲ್ಲಿರಿಸಿಕೊಂಡು, ರಾವಣನು
ತನ್ನ ಸಾವಿನ ನಾಂದಿಗಾಗಿ ಲಂಕೆಗೆ ತೆರಳಿದನು. ಆಕಾಶದಲ್ಲಿ ಸಾಗುತ್ತಿದ್ದಾಗ
ದಾರಿಯಲ್ಲೊಂದೆಡೆ ಸೀತೆ ಐದು ಮಂದಿ ವಾನರರು ದೂರದಲ್ಲಿ ಕುಳಿತಿದ್ದುದನ್ನು
ಕಂಡಳು. ಕೂಡಲೆ ತನ್ನ ಉತ್ತರೀಯವನ್ನೂ ಮೈಯ ಬಂಗಾರವನ್ನೂ ಅವ
ರೆಡೆಗೆ ಎಸೆದಳು. ಅವರಾದರೂ ರಾಮಚಂದ್ರನಿಗೆ ಕುರುಹನ್ನಿತ್ತಾರು ಎಂಬ
 
ಆಸೆಯಿಂದ.
 
ರಾವಣನು ಲಂಕೆಗೆ ಬಂದು ರಾಮನ ವಾರ್ತೆಯನ್ನು ತಿಳಿವುದಕ್ಕಾಗಿ
ಎಂಟು ಮಂದಿ ಗೂಢ ಚಾರರನ್ನು ದಂಡಕೆಗೆ ಕಳಿಸಿದನು. ಅನಂತರ ಸೀತೆಗೆ
ತನ್ನ ಅಂತಃಪುರವನ್ನು ತೋರಿಸಿ ನುಡಿದನು :
 
"ಈ ದುರ್ಗವನ್ನು ದಾಟಿ ರಾಮನು ಇಲ್ಲಿಗೆ ಬರುವುದೆಂದರೇನು ? ಕನ
ಸಿನ ಮಾತು ! ಬಿಟ್ಟುಬಿಡು ರಾಮನ ಆಸೆಯನ್ನು ನನ್ನ ಮಡದಿಯಾಗು
ಸೀತೆ."
 
ಸೀತೆ ಕಣ್ಣೀರೊರಸಿಕೊಂಡು ನುಡಿದಳು:
 
ರಾಮನು ಬರದ ತಾಣವೂ ಒಂದುಂಟೆ ? ನೀನು ಎಲ್ಲಿ ಅಡಗಿದರೂ
ಅವನಿಂದ ತಪ್ಪಿಸಿಕೊಳ್ಳಲಾರೆ."
 
ರಾವಣನು ಸೀತೆಯನ್ನು ಪರಿಪರಿಯಾಗಿ ಗದರಿಸಿದನು. ರಾಕ್ಷಸಿಯರಿಂದ
ಗದರಿಸಿದನು. ಏನೂ ಪ್ರಯೋಜನವಾಗಲಿಲ್ಲ. ಕೊನೆಗೆ ಅವಳನ್ನು ಅಶೋಕ
ವನದಲ್ಲಿ ಇರಿಸಿದನು. ರಾಕ್ಷಸಿಯರಿಂದ ಸುತ್ತುವರಿದ ಸೀತೆ ಶಿಂಶುಪಾ ವೃಕ್ಷದ
ಮೂಲದಲ್ಲಿ, ಟಿಟ್ಟಿಭಗಳಿಂದ ಸುತ್ತುವರಿದ ಹಂಸೆಯಂತೆ ಕಾಗೆಗಳಿಂದ ಸುತ್ತು
 
ವರಿದ ಕೋಗಿಲೆಯಂತೆ ವಾಸಿಸಿದಳು.
 
ಸೀತಾ-ರಾಮರ ಮುಂದಿನ ಅಭಿನಯದಲ್ಲಿ ವಿಪ್ರಲಂಭ ಶೃಂಗಾರದ
ಅಂಕಪರದೆ ತೆರೆಯಿತು !