This page has been fully proofread once and needs a second look.

ಲಕ್ಷ್ಮಣನು ಚತುರತೆಯಿಂದ ಉತ್ತರಿಸಿದನು:
 
"ನಾನು ಎಷ್ಟಾದರೂ ನನ್ನಣ್ಣನ ಸೇವಕ. ಒಬ್ಬ ಕೂಲಿಯಾಳನ್ನು
ಗಂಡನೆಂದು ಕರೆವುದು ನಿನಗೆ ಅವಮಾನ. ನಿನ್ನಂಥ ಸುಂದರಿ ನನ್ನ ಅಣ್ಣನನ್ನೆ ವರಿಸಬೇಕು. ನೋಡು, ಅವನ ಹೆಂಡತಿ ಎಂಥ ಬಡಕಲಾಗಿ- ದ್ದಾಳೆ. ನಿನ್ನಂಥ ಮುದ್ದು ಅತ್ತಿಗೆ ದೊರಕುವುದಾದರೆ ನನಗೆ ಅದೊಂದು ಹೆಮ್ಮೆ!"
 
ಇವರ ಹಾಸ್ಯ ಅವಳಿಗೆ ಹೇಗೆ ಅರಿವಾಗಬೇಕು ! ಅವಳು ಮತ್ತೆ ರಾಮ-
ನೆಡೆಗೆ ಬಂದು ನುಡಿದಳು :
 
"ನೀನೇ ನನ್ನ ಗಂಡನಾಗಬೇಕು. ಆಗ ನಮ್ಮ ದಾಂಪತ್ಯ ಎಷ್ಟು
ಸೊಗಸಾದೀತು ? ಇವಳು ನನ್ನ ಸವತಿ. ಇವಳೇ ಅಲ್ಲವೆ ನಿನ್ನ ಮನಸ್ಸನ್ನು ಸೆರೆಹಿಡಿದದ್ದು, ನೋಡುತ್ತಿರು, ಈ ತೆಳು ನಡುವಿನ ಹೆಣ್ಣು ಹುಟ್ಟಿಯೇ ಇಲ್ಲ ಎಂದು ಮಾಡದಿದ್ದರೆ ಮತ್ತೆ ಹೇಳು." ಎಂದು ಸೀತೆ ಯನ್ನು ಹಿಡಿದು ಕೊಲ್ಲಹೋದಳು.
 
ಚುರುಕು ಕೈಯ ಸೌಮಿತ್ರಿ ಅಷ್ಟರಲ್ಲಿಯೆ ತನ್ನ ಕೂರಸಿಯಿಂದ ರಾಕ್ಷಸಿಯ ಕಿವಿ-ಮೂಗುಗಳನ್ನು ಕತ್ತರಿಸಿಬಿಟ್ಟಿದ್ದ. ರಾಕ್ಷಸರ ಸಂಹಾರಕ್ಕೆ ಇದು ನಾಂದಿಯಾಯಿತು. ಶೂರ್ಪಣಖೆಯ ಮೈಯೆಲ್ಲ ಈ ನೆತ್ತರಿನಿಂದ ತೊಯ್ದು ಕೆಂಪಾಯಿತು. ಅವಳು ವಿಕಾರವಾಗಿ ಕೂಗಿದಳು. ಓಡಿಹೋಗಿ ಸೋದರರಾದ ಖರ-ದೂಷಣರಿಗೆ ದೂರನ್ನಿತ್ತಳು.
 
ಖರನು ಕುಪಿತನಾಗಿ ಗರ್ಜಿಸಿದನು:
 
"ಯಾರವನು ನಿನ್ನ ಮೈಯಲ್ಲಿ ನೆತ್ತರು ಬರಿಸಿದವನು ? ನನ್ನ ಬಾಣಗಳ ಬಾಯಾರಿಕೆಯನ್ನು ಅವನ ನೆತ್ತರಿನಿಂದಲೆ ಹಿಂಗಿಸುವೆ."
 
"ಇಬ್ಬರು ತರುಣರು-ಒಬ್ಬ ಯುವತಿ ಇದೇ ಕಾಡಿನಲ್ಲಿ ಅಲೆಯು- ತ್ತಿದ್ದಾರೆ. ಅವರ ನೆತ್ತರನ್ನು ಹೀರದೆ ನನಗೆ ತೃಪ್ತಿಯೇ ಇಲ್ಲ."
 
ಖರನು ಕೂಡಲೆ ತನ್ನ ಅನುಚರರಾದ ಹದಿನಾಲ್ಕು ಮಂದಿ ಪ್ರಧಾನ
ರಾಕ್ಷಸರನ್ನು ಶೂರ್ಪಣಖೆಯೊಡನೆ ಕಳಿಸಿಕೊಟ್ಟನು. ಬಂದ ರಾಕ್ಷಸರನು
ಕಂಡು ರಾಮಚಂದ್ರ ನುಡಿದ :
 
"ಬ್ರಹ್ಮದ್ರೋಹಿಗಳೆ ! ನನ್ನೆದುರು ಬಂದಿರಾದರೆ ನೀವು ಜೀವಸಹಿತ
ಹಿಂತಿರುಗಲಾರಿರಿ."