This page has been fully proofread once and needs a second look.

ಸಂಗ್ರಹರಾಮಾಯಣ
 
ಲಕ್ಷ್ಮಣನು ಚತುರತೆಯಿಂದ ಉತ್ತರಿಸಿದನು:
 

 
"ನಾನು ಎಷ್ಟಾದರೂ ನನ್ನಣ್ಣನ ಸೇವಕ. ಒಬ್ಬ ಕೂಲಿಯಾಳನ್ನು

ಗಂಡನೆಂದು ಕರೆವುದು ನಿನಗೆ ಅವಮಾನ. ನಿನ್ನಂಥ ಸುಂದರಿ ನನ್ನ ಅಣ್ಣನನ್ನೆ
ವರಿಸಬೇಕು. ನೋಡು, ಅವನ ಹೆಂಡತಿ ಎಂಥ ಬಡಕಲಾಗಿ- ದ್ದಾಳೆ. ನಿನ್ನಂಥ
ಮುದ್ದು ಅತ್ತಿಗೆ ದೊರಕುವುದಾದರೆ ನನಗೆ ಅದೊಂದು ಹೆಮ್ಮೆ!"
 
(&
 

 
ಇವರ ಹಾಸ್ಯ ಅವಳಿಗೆ ಹೇಗೆ ಅರಿವಾಗಬೇಕು ! ಅವಳು ಮತ್ತೆ ರಾಮ-

ನೆಡೆಗೆ ಬಂದು ನುಡಿದಳು :
 

 
"ನೀನೇ ನನ್ನ ಗಂಡನಾಗಬೇಕು. ಆಗ ನಮ್ಮ ದಾಂಪತ್ಯ ಎಷ್ಟು

ಸೊಗಸಾದೀತು ? ಇವಳು ನನ್ನ ಸವತಿ. ಇವಳೇ ಅಲ್ಲವೆ ನಿನ್ನ ಮನಸ್ಸನ್ನು
ಸೆರೆಹಿಡಿದದ್ದು, ನೋಡುತ್ತಿರು, ಈ ತೆಳು ನಡುವಿನ ಹೆಣ್ಣು ಹುಟ್ಟಿಯೇ ಇಲ್ಲ
ಎಂದು ಮಾಡದಿದ್ದರೆ ಮತ್ತೆ ಹೇಳು." ಎಂದು ಸೀತೆ ಯನ್ನು ಹಿಡಿದು ಕೊಲ್ಲ
ಹೋದಳು.
 

 
ಚುರುಕು ಕೈಯ ಸೌಮಿತ್ರಿ ಅಷ್ಟರಲ್ಲಿಯೆ ತನ್ನ ಕೂರಸಿಯಿಂದ ರಾಕ್ಷಸಿಯ
ಕಿವಿ-ಮೂಗುಗಳನ್ನು ಕತ್ತರಿಸಿಬಿಟ್ಟಿದ್ದ. ರಾಕ್ಷಸರ ಸಂಹಾರಕ್ಕೆ ಇದು ನಾಂದಿ
ಯಾಯಿತು. ಶೂರ್ಪಣಖೆಯ ಮೈಯೆಲ್ಲ ಈ ನೆತ್ತರಿನಿಂದ ತೊಯ್ದು ಕೆಂಪಾ-
ಯಿತು. ಅವಳು ವಿಕಾರವಾಗಿ ಕೂಗಿದಳು. ಓಡಿಹೋಗಿ ಸೋದರರಾದ
ಖರ-ದೂಷಣರಿಗೆ ದೂರನ್ನಿತ್ತಳು.
 

 
ಖರನು ಕುಪಿತನಾಗಿ ಗರ್ಜಿಸಿದನು:
 

 
"ಯಾರವನು ನಿನ್ನ ಮೈಯಲ್ಲಿ ನೆತ್ತರು ಬರಿಸಿದವನು ? ನನ್ನ ಬಾಣಗಳ
ಬಾಯಾರಿಕೆಯನ್ನು ಅವನ ನೆತ್ತರಿನಿಂದಲೆ ಹಿಂಗಿಸುವೆ."
 

 
"ಇಬ್ಬರು ತರುಣರು-ಒಬ್ಬ ಯುವತಿ ಇದೇ ಕಾಡಿನಲ್ಲಿ ಅಲೆಯು- ತ್ತಿದ್ದಾರೆ.
ಅವರ ನೆತ್ತರನ್ನು ಹೀರದೆ ನನಗೆ ತೃಪ್ತಿಯೇ ಇಲ್ಲ."
 

 
ಖರನು ಕೂಡಲೆ ತನ್ನ ಅನುಚರರಾದ ಹದಿನಾಲ್ಕು ಮಂದಿ ಪ್ರಧಾನ

ರಾಕ್ಷಸರನ್ನು ಶೂರ್ಪಣಖೆಯೊಡನೆ ಕಳಿಸಿಕೊಟ್ಟನು. ಬಂದ ರಾಕ್ಷಸರನು

ಕಂಡು ರಾಮಚಂದ್ರ ನುಡಿದ :
 

 
"ಬ್ರಹ್ಮದ್ರೋಹಿಗಳೆ ! ನನ್ನೆದುರು ಬಂದಿರಾದರೆ ನೀವು ಜೀವಸಹಿತ

ಹಿಂತಿರುಗಲಾರಿರಿ."