This page has not been fully proofread.

ಸಂಗ್ರಹರಾಮಾಯಣ
 
ದರು. ರಾಮನು ಅವನ್ನು ಸ್ವೀಕರಿಸಿ ಪಂಚವಟಿಯ ಕಡೆಗೆ ತೆರಳಿದನು. ಅಲ್ಲಿ
ಜಟಾಯುವೆಂಬ ಪಕ್ಷಿರಾಜನ ಪರಿಚಯವಾಯಿತು. ಅವನು ತನ್ನ ಕಥೆಯನ್ನು
ಪ್ರಭುವಿನ ಬಳಿ ನಿವೇದಿಸಿಕೊಂಡನು:
 
೯೧
 
"ರಾಮಚಂದ್ರ, ನಾನು ದಶರಥನ ಹಳೆಯ ಗೆಳೆಯ. ನನ್ನ ಹೆಸರು
ಜಟಾಯು ಎಂದು. ನಾನು ವಿನತಾಪುತ್ರನಾದ ಅರುಣನ ಮಗ."
 
ಜಟಾಯುವಿನ ಜತೆಗೆ ರಾಮನು ಗೋದಾವರಿಯ ತಡಿಯಲ್ಲಿರುವ
ಪಂಚವಟಿಯನ್ನು ಪ್ರವೇಶಿಸಿದನು. ಪಂಚವಟಿ ನಿಸರ್ಗ ರಮಣಿಯ ನೆಲೆವೀಡು.
ಎಲ್ಲೆಲ್ಲಿಯೂ ಹೂ-ಹಣ್ಣುಗಳಿಂದ ತುಂಬಿದ ಮರಗಳು, ಬಳ್ಳಿಗಳು, ಫಲಭಾರ
ದಿಂದ ಬಗ್ಗಿದ್ದ ಮರಗಳು, ರಾಮನನ್ನು ಕಂಡು ಗೌರವದಿಂದ ತಲೆ ಬಾಗಿಸಿ
ದಂತಿತ್ತು ! ತಂಬೆಲರಿನಿಂದ ನಲುಗುವ ಚಿಗುರುಗಳಿಂದ ಕೈಮುಗಿವವೋ
ಎನ್ನುವಂತಿತ್ತು ! ಉದುರಿದ ಹೂಗಳಿಂದ, ಹಣ್ಣುಗಳಿಂದ ಪುಷ್ಪಾಂಜಲಿಯನ್ನೂ
ನೈವೇದ್ಯವನ್ನೂ ಅರ್ಪಿಸುವಂತಿತ್ತು ! ಮಾವಿನ ಮರಗಳಲ್ಲಿ ಇಂಚರಗೆಯ್ಯುತ್ತಿದ್ದ
ಕೋಗಿಲೆಗಳು ರಾಮನ ಗುಣಗಾನ ಮಾಡುತ್ತಿದ್ದವು ! ಕಾಡಿಗೆ ಕಾಡೇ
ಸಂತಸದಿಂದ ನಲೆದಾಡುತ್ತಿತ್ತು. ಜಡದಲ್ಲೂ ಚೈತನ್ಯ ತುಂಬಿತ್ತು. ಪ್ರಕೃತಿ
ದೇವಿಯ ಸೌಂದರ್ಯಪತಾಕೆ ಆ ಬನದಲ್ಲಿ ಹಾರಾಡುತ್ತಿತ್ತು.
 
ರಾಮಚಂದ್ರನಿಗೆ ಈ ತಾಣ ತುಂಬ ಹಿತವಾಗಿ ಕಂಡಿತು. ಅಲ್ಲಿ ವಾಸಕ್ಕೆ
ಯೋಗ್ಯವಾದ ಎಲೆವನೆಯೊಂದನ್ನು ರಚಿಸುವಂತೆ ಲಕ್ಷ್ಮಣನಿಗೆ ಆಜ್ಞಾಪಿಸಿದನು.
ಲಕ್ಷ್ಮಣನ ಕೈಚುರುಕು ಕೇಳಬೇಕೆ ? ಕ್ಷಣಾರ್ಧದಲ್ಲಿ ಅರಮನೆಯನ್ನೂ
ನಾಚಿಸುವಂಥ ಪರ್ಣಶಾಲೆಯ ನಿರ್ಮಾಣವಾಯಿತು. ತಮ್ಮನ ಕೌಶಲ್ಯಕ್ಕೆ
ಮೆಚ್ಚಿದ ರಾಮಚಂದ್ರ ಅವನನ್ನು ಬಿಗಿದಪ್ಪಿಕೊಂಡನು.
 
ಮೂಗು ಕತ್ತರಿಸಿ ಮುಹೂರ್ತ ಮಾಡಿದರು
 
ವನವಾಸದ ಅವಧಿಯಲ್ಲಿ ಸುಮಾರು ಹದಿಮೂರು ವರ್ಷಗಳು ಸಂದವು.
ಹೇಮಂತ ಋತುವಿನ ಒಂದು ಪ್ರಾತಃಕಾಲ, ಕಾಡೆಲ್ಲ ಮಂಜುಕವಿದಿತ್ತು.
ಹೊರಬಂದರೆ ಮೈ ಕೊರೆವಂಥ ಚಳಿ, ರಾಮಚಂದ್ರನು ಗೋದಾವರಿಯೆಡೆಗೆ
ಸ್ನಾನಕ್ಕಾಗಿ ತೆರಳಿದ್ದನು. ಅವನ ಹಿಂದೆ ಕಲಶಹಸ್ತನಾದ ಸೌಮಿತ್ರಿಯೂ
ಸೀತೆಯೂ ಇದ್ದರು. ಲಕ್ಷ್ಮಣನು ಏನೋ ನೆನೆಸಿಕೊಂಡವನಂತೆ ಉದ್ಧರಿಸಿದನು: