This page has not been fully proofread.

೩೧
 
ಮತ್ತ ಹಂಸಗಳ ಮತ್ತಿನುಲಿವನೇ ಮತ್ತೆ ಎಳೆದು ಬಳಸಿ
ಬೆಳಗಿನಲ್ಲಿ ಅರಳಿರುವ ತಾವರೆಯ ಕಂಪಕೆಳೆಯ ಬೆಳೆಸಿ ।
ಸುಸಿಲ ನಲಸಿಕೆಯ ಕಳೆವುದಲ್ಲಿ ಶಿಪಾವಾತವಂತೆ
ಮಧುರವಾಗಿಯೇ ಚದುರನಾಡುತಿಹ ಬಲ್ಲ ನಲ್ಲನಂತೆ
 
೩೨
 
ಕೇಶ-ಧೂಪ ಎಳೆದಾವು ನಿನ್ನ, ಬೆಳಕಂಡಿಯಿಂದ ಹರಿದು
ನೀಲಿಬಣ್ಣ ನೀನಣ್ಣ, ನವಿಲು ನಲಿದಾವು ಕುಣಿದು ಕರೆದು
ಅಲಸುಗಳೆಯೊ, ಆ ಕಂಪು ಮಾಡಗಳಲೇನು ಇಂದ್ರಮೋಡಿ
ನಡೆದು ನೀರೆಯರು ಬಣ್ಣ ಬಳೆದು ಅಂಗಾಲ ಪದ್ಮ ಮೂಡಿ ।
 
೩೩
 
ರುದ್ರ-ಗಣವು ಬಾಗೀತು ನಿನಗೆ, ಹೇ ಕೊರಳಗರಳ ವರಣಾ
ಕಾಣು ಹೋಗು ಶ್ರಿ ಚಂಡಿಪತಿಯ ಮಾಂಕಾಳ ಪುಣ್ಯ ಚರಣಾ
ಅವನ ತೋಟದಲ್ಲಿ ಗಾಳಿ ತೀಡುವದು ಗಂಧವತಿಯನೆರೆದು
ಕಮಲಗಂಧಿಯರು ಮಿಂದ ನೀರಿಗರವಿಂದಗಂಧ ಬೆರೆದು
 
೩೪
 
ನಿನ್ನ ಕಣ್ಣ ಹೊಲದಾಚೆಗಾಗಿ ರವಿ ತಣ್ಣಗಿರುವವರೆಗೂ
ಸುಳ್ಳೆಪಳ್ಳೆ ತರಹರಿಸಬೇಡ, ಇರು ಅಲ್ಲೆ, ಬೈಗ ಮರೆಗೂ ।
ದೇವ-ಸೇವೆ ನಡೆದಾಗ ಸಂಜೆ ದುಂದುಭಿಯ ಮೊಳಗು ನೀನು
ಪೂಜ್ಯವಸ್ತುವಿನ ಪೂಜೆಗೊದಗದಾ ನಾದವಿದ್ದು ಏನು ? ।
 
೩೫
 
ದೇವದಾಸಿಯರು ಹೆಜ್ಜೆ ಹಾಕಿ, ನಡುಗೆಜ್ಜೆ ಕುಣಿಸಿ ನವುರಿ,
ಬಳ್ಳಿತೋಳು ಬಳುಕಾಡೆ ಬೀಸುವರು ರನ್ನ ಗಾವ-ಚವರಿ ॥
ನಿನ್ನ ಮೊದಲ ಹನಿ ಉಗುರು-ತಾಣ ತಂಗೊಳಿಸೆ ಎದೆಯ ತಾಗಿ
ನೋಟ ಬೀರುವರು ನಿನ್ನ ಕಡೆಗೆ ತುಂತುಂಬಿ ಮಾಲೆಯಾಗಿ
 
೩೬
 
ಬಳಿಕ ಬೆಳೆದ ಉದ್ದುದ್ದ ಟೊಂಗೆ ಮರದುದಿಗಳಲ್ಲಿ ಒರಗಿ
ಸಂಜೆಗೆಂಪು-ದಾಸಾಳಬಣ್ಣದವನಾಗಿ ನೀನು ಮೆರುಗಿ ।
ಶಿವನು ಕುಣಿಯಲಿರೆ ಅವನ ತೊಡೆಯ ಹಸಿ ತೊವಲಿನಿಂದ ಮುಚ್ಚಿ
ಮಾಡು ಅವನ ಸತಿ ನೋಡುವಂತೆ ದೃಢ ಭಕುತಿಯಿಂದ ಮೆಚ್ಚಿ ।
ಕನ್ನಡ ಮೇಘದೂತ – ಭಾವಾನುವಾದ ಖಂಡಕಾವ್ಯ : ಲೇ : ದ. ರಾ. ಬೇಂದ್ರೆ (ಅಂಬಿಕಾತನಯದತ್ತ) ೧೯