This page does not need to be proofread.

ಹಾದಿ ಹೇಳುವೆನು ಕೇಳು ನಿನಗೆ ಅನುಕೂಲ ಪಯಣಕಾಗಿ
ಬಳಿಕ ನನ್ನ ಸಂದೇಶ ಕಿವಿಗೆ ಪರಿಣಮಿಸಲಮೃತವಾಗಿ ॥
ತೊಳಲಿ ಬಳಲಿ ಗಿರಿ ಶಿಖರಗಳಲಿ ಕಾಲಿಟ್ಟು ಸಾಗುವಾಗ
ದಣಿವ ತವಿಸು, ನೀರಿನಿಸೆ ಸವಿಸಿ ಆ ಹಳ್ಳ-ಕೊಳ್ಳದಾಗ ॥ ೧೩
 
ಗಿರಿಯ ಶೃಂಗವೇ ಹರಿದು ಹೋಗುವದೋ ಏನೋ ಎಂಬುದಾಗಿ
ಗಾಳಿ ಬೀಸುತಿರೆ ಸಿದ್ಧ-ಮುಗ್ಧೆಯರು ನೋಡೆ ಚಕಿತರಾಗಿ
ಹಾರು ಬಡಗಣಕೆ ನೀರ-ನಿಚುಲನೆಡೆಯಿಂದ ಮೇಲೆ ಅತ್ತ
ಹಾದಿಯಲ್ಲಿ ದಿಬ್‌ಙ್ನಾಗ ಬೀಸಿದಾ ಕರವ ತಪ್ಪಿಸುತ್ತ ॥ ೧೪
 
ಏಳು ರತುನಗಳ ಮೇಳಗೂಡಿ ಕಂಗೊಳಿಸುವಂತೆ ಮುಂದು
ಹುತ್ತದಿಂದ ಎದ್ದಿರುವದಲ್ಲಿ ಅಗೊ ಇಂದ್ರಧನುವದೊಂದು ॥
ನಿನ್ನ ಕಪ್ಪು ಮೈಗದರ ಒಪ್ಪ ಬರಲೇನು ಕಾಂತಿ ಬಂತು
ಗೋಪವೇಷದಾ ವಿಷ್ಣು, ಗರಿಯ ಧರಿಸಿರಲು ಕಾಣುವಂತು ॥ ೧೫
 
ಕುಡಿದು ಬಿಡುವರೋ ಕಣ್ಣ ಕುಡಿಗಳಲಿ ಬೆಳೆಗೆ ಬಂಧು ಎಂದು
ಹುಬ್ಬ ಹಾರಿಸುವ ಬಿಂಕವಿಲ್ಲದಾ ಹಳ್ಳಿ ಹೆಂಗಳಂದು ॥
ಅದೇ ಹರಗಿ ನೆಲಗಂಪ ಹರಹುವಾ ಹೊಲದ ಮಾಳವೇರಿ
ನೀರ ತಳಿಸಿ ಹಗುರಾಗಿ, ಉತ್ತರಕೆ ಮತ್ತೆ ಹೋಗು ಸಾರಿ ॥ ೧೬
 
ಮಾವುಮಲೆಯ ಕಡು ಕಾಡಬೇಗೆ ತವಿಸಿದ್ದೆ ಮಳೆಯ ಸುರಿಸಿ
ತಣಿಸದಿರುವದೇ ದಾರಿದಣಿವಿಕೆಯ, ಅದುವು ಕೆಳೆಯ ಸ್ಮರಿಸಿ ॥
ಎಂಥ ಕಿರುಕುಳನು ಮೊದಲು ಮಾಡಿದುಪಕಾರ ಮರೆಯಬಹುದೇ
ಎಂದಮೇಲೆ ಅವನಂಥ ದೊಡ್ಡವನು ವಿಮುಖನಾಗಲಹುದೇ ॥ ೧೭
 
ತೊಳೆದ ತುರುಬು ಕಪ್ಪಾದ ನೀನು ಗಿರಿಶಿಖರದಲ್ಲಿ ತೇಲೆ
ಆಷಾಢ ಮಾವು ಸುರಿದಾವು ಗೊಂಚಲಲಿ ಬೆಟ್ಟದೆದೆಯ ಮೇಲೆ ॥
ಅಮರ ಮಿಥುನಗಳ ಪ್ರಣಯ-ದೃಷ್ಟಿ ಅರಳರಳುವಂತೆ ಆಗೆ
ಮಲೆಯ ತುದಿಯು ಕಪ್ಪಾಗೆ ತೋರುವದು ನೆಲದ ಮೊಲೆಯ ಹಾಗೆ ॥ ೧೮