This page does not need to be proofread.

೧೩
 

 
ಹಾದಿ ಹೇಳುವೆನು ಕೇಳು ನಿನಗೆ ಅನುಕೂಲ ಪಯಣಕಾಗಿ

ಬಳಿಕ ನನ್ನ ಸಂದೇಶ ಕಿವಿಗೆ ಪರಿಣಮಿಸಲಮೃತವಾಗಿ

ತೊಳಲಿ ಬಳಲಿ ಗಿರಿ ಶಿಖರಗಳಲ್ಲಿ ಕಾಲಿಟ್ಟು ಸಾಗುವಾಗ

ರಣಿವ ತವಿಸು, ನೀರಿನಿಸೆ ಸವಿಸಿ ಆ ಹಳ್ಳ-ಕೊಳ್ಳದಾಗ ।
 

 
೧೮
 

 
ಗಿರಿಯ ಶೃಂಗವೇ ಹರಿದು ಹೋಗುವದೋ ಏನೋ ಎಂಬುದಾಗಿ

ಗಾಳಿ ಬೀಸುತಿರೆ ಸಿದ್ಧ-ಮುಗ್ಧಯರು ನೋಡೆ ಚಕಿತರಾಗಿ

ಹಾರು ಬಡಗಣಕೆ ನೀರ-ನಿಚುಲನೆಡೆಯಿಂದ ಮೇಲೆ ಅತ್ತ

ಹಾದಿಯಲ್ಲಿ ದಿಬ್‌ನಾಗ ಬೀಸಿದಾ ಕರವ ತಪ್ಪಿಸುತ್ತ
 

 
೧೫
 

 
ಏಳು ರತುನಗಳ ಮೇಳಗೂಡಿ ಕಂಗೊಳಿಸುವಂತೆ ಮುಂದು

ಹುತ್ತದಿಂದ ಎದ್ದಿರುವದಲ್ಲಿ ಅಗೋ ಇಂದ್ರಧನುವದೊಂದು

ನಿನ್ನ ಕಪ್ಪು ಮೈಗದರ ಒಪ್ಪ ಬರಲೇನು ಕಾಂತಿ ಬಂತು

ಗೋಪವೇಷದಾ ವಿಷ್ಣು, ಗರಿಯ ಧರಿಸಿರಲು ಕಾಣುವಂತು ।
 

 
೧೬
 

 
ಕುಡಿದು ಬಿಡುವರೋ ಕಣ್ಣ ಕುಡಿಗಳಲ್ಲಿ ಬೆಳೆಗೆ ಬಂಧು ಎಂದು

ಹುಬ್ಬ ಹಾರಿಸುವ ಬಿಂಕವಿಲ್ಲದಾ ಹಳ್ಳಿ ಹೆಂಗಳಂದು ।

ಅದೇ ಹರಗಿ ನೆಲಗಂಪ ಹರಹುವಾ ಹೊಲದ ಮಾಳವೇರಿ

ನೀರ ತಳಿಸಿ ಹಗುರಾಗಿ, ಉತ್ತರಕೆ ಮತ್ತೆ ಹೋಗು ಸಾರಿ
 

 
೧೭
 

 
ಮಾವುಮಲೆಯ ಕಡು ಕಾಡಬೇಗೆ ತವಿಸಿದ್ದೆ ಮಳೆಯ ಸುರಿಸಿ

ತಣಿಸದಿರುವದೇ ದಾರಿದಣಿವಿಕೆಯ, ಅದುವು ಕೆಳೆಯ ಸ್ಮರಿಸಿ ।

ಎಂಥ ಕಿರುಕುಳನು ಮೊದಲು ಮಾಡಿದುಪಕಾರ ಮರೆಯಬಹುದೇ

ಎಂದಮೇಲೆ ಅವನಂಥ ದೊಡ್ಡವನು ವಿಮುಖನಾಗಲಹುದೇ
 

 
೧೮
 

 
ತೊಳೆದ ತುರುಬು ಕಪ್ಪಾದ ನೀನು ಗಿರಿಶಿಖರದಲ್ಲಿ ತೇಲೆ

ಆಷಾಢ ಮಾವು ಸುರಿದಾವು ಗೊಂಚಲಲಿ ಬೆಟ್ಟದೆದೆಯ ಮೇಲೆ

ಅಮರ ಮಿಥುನಗಳ ಪ್ರಣಯ-ದೃಷ್ಟಿ ಅರಳರಳುವಂತೆ ಆಗೆ

ಮಲೆಯ ತುದಿಯು ಕಪ್ಪಾಗೆ ತೋರುವದು ನೆಲದ ಮೊಲೆಯ ಹಾಗೆ

ಕನ್ನಡ ಮೇಘದೂತ – ಭಾವಾನುವಾದ ಖಂಡಕಾವ್ಯ : ಲೇ : ದ ರಾ. ಬೇಂದ್ರೆ (ಅಂಬಿಕಾತನಯದತ್ತ) ೧೫