This page has been fully proofread once and needs a second look.

೪೫
 
ಮೂರು ಜಾವ ಉದ್ದಿದ್ದ ಇರುಳು ಕ್ಷಣದಂತೆ ಕಳೆಯಬಹುದೇ

ಇಡಿಯ ಹಗಲು ಯಾವಾಗಲೂನು ದಿಗಿಲಾಗದಂತೆ ಇಹುದೇ

ಇಂತು ಚಿತ್ ಕೈಗೂಡದಾಗ ಬಯಲಾಸೆಯಿಂದ ನೊಂದು

ನಿನ್ನ ವಿರಹ ವ್ಯಥೆಯಿಂದ ಬೆಂದು,ಬದುಕಿಹೆನು ಹೇಗೊ ಇಂದು
 

 

 
ಆದರೂನು ಹಿಡಿದಿರುವೆ ಜೀವ, ಏನೇನೋನೊ ಲೆಕ್ಕ ಹಾಕಿ

ಸುಭಗೆ ಅಂಜಿ ನೀ ಸಾಯಬೇಡ, ಕಳೆ ಕಾಲ ಹೇಗೊ ನೂಕಿ

ಯಾರು ಬರಿಯ ಸುಖ, ಬರಿಯ ದು:ಖ ಪಟ್ಟವರು ಲೋಕದಲ್ಲಿ ?

ದೆಸೆಯು ಕೆಳಗೆ ಮೇಲಾಗಿ ತಿರುಗುವದು ಏಕಚಕ್ರದಲ್ಲಿ
 

 

 
ಹಾವು ಹಾಸಿಗೆಯ ಹರಿಯು, ತೊರೆವ ದಿನ, ಶಾಪ ಮುಗಿಯಲಹುದು

ನಾಲ್ಕು ತಿಂಗಳನು ಕಣ್ಣು ಮುಚ್ಚಿ ನೀನಿನ್ನು ಕಳೆಯಬಹುದು ॥

ಬಳಿಕ ಬರುವೆ, ಇನ್ನುಳಿದ ಬಯಕೆಗಳು ಇರಲಿ ಏಕೆ ಚಿಂತೆ ?

ಬೆಳೆವ ತಿಂಗಳಲ್ಲಿ ಇರುಳು ಇರುಳುಗಳ ಅದಕೆ ಕಳೆವೆವೆಂತೆ ॥

 

 
ಒಮ್ಮೆ ನಿನಗೆ ದಿನದಂತೆ ಕೊರಳ ತಳಕಿರಿಸಿ ನಿದ್ದೆಯಂತೆ

ತೋಳದಿಂಬಿನಲಿ ಹೊರಳಿ, ನೀನಳುತ ಏಕೊ ಎದ್ದೆಯಂತೆ

ಕೇಳಕೇಳುತಿರೆ ಏನು ಎಂದು ಒಳನಕ್ಕು ಅಂದೆಯಂತೆ :-

"ಕಂಡೆ ಕನಸಿನಲಿ, ಕಳ್ಳ, ನೀನು ಯಾವಳನೊ ಕೂಡಿದಂತೆ"
 

 

 
ಕುಶಲನಿರುವೆ ನಾನಿಲ್ಲಿ ನಿನ್ನನೇ ನೆನೆದು ಧೈರ್ಯತಾಳಿ

ನೀನು ಕೂಡ ಎದೆಗೆಡಿಸಿಕೊಳ್ಳದಿರು ಏನೊ ಸುದ್ದಿ ಕೇಳಿ

ಅಗಲಿದಾಗೆ ತಿನ್ನುವದು ಸ್ನೇಹವೆನ್ನುವರು ಜೀವವನ್ನು

ಕೂಡಿದೊಡನೆ ಅದೆ ಸೂರೆ ಮಾಡುವದು ಪ್ರೇಮಭಾವವನ್ನು
 
೪ ಕನ್ನಡ ಮೇಘದೂತ - ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇರೆ