This page has not been fully proofread.

೨೩
 
ನನ್ನ ಕುರಿತು ಪದವೊಂದು ಕಟ್ಟಿ ಅದ ಹೇಳಲೆಣಿಸಿ ಜಾಣೆ
ತಾನೆ ರಚಿಸಿದಾ ಏರು-ಇಳುವುಗಳ ಕ್ರಮವ ಮರೆತು ತಾನೇ ।
ತೊಟ್ಟು ಸುರಿವ ಕಂಬನಿಯ ತಂತಿಯನೆ ಮಿಡಿಯುತಿಹ ದೀನ
ಮಾಸುಬಟ್ಟೆ ತೊಟ್ಟವಳ ತೊಡೆಯೊಳಿರಬಹುದು ಬಿದ್ದ ವೀಣೆ
 
೨೪
 
ಕಳೆದವೆಷ್ಟು ಇನ್ನುಳಿದವೆಷ್ಟು ದಿನವೆಂದು ಲೆಕ್ಕವಿಟ್ಟು
ಹೊಸ್ತಿಲಕ್ಕೆ ಹೂವಿಟ್ಟು ನೋಡುವಳೋ ನಾನು ಹೋದ ತೊಟ್ಟು ।
ಇಲ್ಲ ಎದೆಯ ಮುಟ್ಟಿಳಿದ ಮೊದಲ ಸಂಗಗಳ ಸವಿವಳೇನೋ
ನಲ್ಲರಗಲೆ ನಲ್ಲೆಯರಿಗೆಲ್ಲ ಇವು ಆಟ ಇಷ್ಟೆ ತಾನೋ ? ।
 
೨೫
 
ಹಗಲು ಹೊತ್ತು ಹೋದೀತು ಕೆಲಸದಲ್ಲಿ ಹೇಗೊ, ಬಲ್ಲೆ ನಾನು
ಇರುಳು ಅವಳ ಗತಿಯೇನೋ ? ಅಳುವದೋ ? ನೆನೆಯಲೊಲ್ಲೆ ನಾನು
 
ನನ್ನ ಸುದ್ದಿ ಹೇಳಿದರೆ ಸಾಕು, ನೀನಿಣಿಕಿ ನೋಡು, ಪಾಪಾ
ಸ್ವಾ ನೆಲದೊಳೇ ನಿದ್ದೆಯಿಲ್ಲದೇ ಹೊರಳುತಿರುವ ತಾಪಾ ।
 
೨೬
 

 
ಹೊರಳು ಮಗ್ಗುಲಗಲಿಕೆಯ ಹಾಸಿನಲಿ ಸೋತ ಮೈಯ್ಯ ಚೆಲ್ಲಿ
ಓರೆಯಾಗಿ ಬಿದ್ದಿರುವ ಚಂದ್ರಕಳೆಯಂತೆ ಪಡುವಲಲ್ಲಿ,
ಯಾವ ಇರುಳು ನನ್ನೊಡನೆ ಬೇಟದಲಿ ಕ್ಷಣಿಕವಾಗಿ ಹೋಯ್ತು
ಅವಳಿಗದುವೆ ಬಿಸಿಯುಸಿರಿಯತ್ತು ಮುಗಿದೀತೆ ಎನುವೊಲಾಯ್ತು ।
 
೨೭
 
ಇಂಪುಗರೆವ ಇಂದುವಿನ ಕಿರಣ ಜಾಳಾಂದ್ರದಿಂದ ಸುರಿಯ
ಆಸೆಗೂಡಿ ಹರಿದೋಡಿ, ನೋಡಿ, ಒಡೆದಂತೆ ಹಿಂದೆ ಸರಿಯೆ ।
ಮುಚ್ಚಲಿಲ್ಲ, ಸರಿ, ಬಿಚ್ಚಲಿಲ್ಲ ಎನುವಂಥ ಕಮಲದಂತೆ
ಎವೆಯು ತೊಯ್ದು ಕಣ್ಮರೆಯಲೊಲ್ಲದೇ ನಿಲ್ವಳೇನೋ ಭ್ರಾಂತ
 
೨೮
 
ತುಟಿಯ ಚಿಗುರನೊಣಗಿಸುವ ಉಸಿರಿನಲೆ ಹಾರಿಸುವಳು ಎಲ್ಲಾ
ಎಣ್ಣೆ ಕಾಣದುರುಟಾದ ಮುಂಗುರುಳು ಒಲೆಯೆ ಗಲ್ಲಗಲ್ಲಾ ।
ಕಣ್ಣ ತುಂಬ ಕಂಬನಿಯೆ ಆಗಿ, ಕುದಿಯುವ ತಾನು ಬೆಂದು
ನಿದ್ದೆ ಬಂದು, ಕನಸಾರೆ ಕಂಡು, ಸೇರೇನೆ ನನ್ನನೆಂದು ।
೩೬ ಕನ್ನಡ ಮೇಘದೂತ - ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇಂದ್ರೆ