This page has not been fully proofread.


 
ಒಬ್ಬ ಯಕ್ಷ ತನ್ನೊಡೆಯನಿಂದ ನಲ್ಲೆಯನು ಅಗಲಿ ಬೆಂದು
ಶಪಿತ ವರುಷವನು ಕಳೆಯಲಾಗದೇ ಮಹಿಮೆ ಕಳೆದುಕೊಂಡು ॥
ಜನಕತನಯೆ ಮಿಂದುದಕಗಳಲಿ ತಣ್ನೆಳಲ ಅಂಗಳಲ್ಲಿ
ವಸತಿ ನಿಂದನೋ ರಾಮಗಿರಿಯ ಪುಣ್ಯಾಶ್ರಮಂಗಳಲ್ಲಿ ॥ ೧
 
ಅಗಲಿ ಇದ್ದರೂ ಆಸೆಗೊಂಡಿರಲು ಗಿರಿಯೊಳಂತು ಇಂತು
ಕೆಲವೆ ತಿಂಗಳಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು॥
ಕಾರಹುಣ್ಣಿಮೆಯ ಮಾರನೆಯ ದಿನವೆ ಮೋಡ ಕೋಡನಪ್ಪಿ
ಕಂಡಿತೊಡ್ಡಿನೊಡ ಡಿಕ್ಕಿಯಾಡುವಾ ಆನೆ ಬೆಡಗನೊಪ್ಪಿ ॥ ೨
 
ಮೋಡ ನೋಡಿ ಮನಸಾಗಿ ನಿಂತನೋ ಹೇಗೊ ಏನೊ ಕಂಡು
ರಾಜರಾಜನನುಚರನು ಇದ್ದ ಕಣ್ಣೀರ ನುಂಗಿಕೊಂಡು
ಮೋಡ ಕಂಡೊಡನೆ ಬೇರೆ ಬಗೆಯಹುದು ಸುಖಿಗು ಎಂತೊ ಏಕೊ
ಕೊರಳ-ಗೆಳತಿ ದೂರುಳಿದ ಮೇಲೆ ಆ ಗತಿಯ ಹೇಳಲೇಕೋ ॥ ೩
 
ಬಂತು ಶ್ರಾವಣಾ, ಎಂತು ಬದುಕುವಳೋ ಮಡದಿ ಜೀವ ಉಳಿಸಿ
ಮೋಡದೊಡನೆ ತನ್ನೊಳಿತಿನೊಸಗೆಯನು ಅಂತೆ ಕಳಿಸಲೆಳಸಿ॥
ಬೆಟ್ಟ-ಮಲ್ಲಿಗೆಯ ಹೊಚ್ಚ ಹೂವಿನೊಡ ಕಾಲನೀರ ನೀಡಿ
ಇದಿರುಗೊಂಡು ಬರಮಾಡಿಕೊಂಡ ಒಲಿದೊಲಿವ ಮಾತನಾಡಿ ॥ ೪
 
ಗಾಳಿ-ನೀರು-ಉಗಿ-ಬೆಂಕಿಗೂಡಿ ಆಗಿರುವ ಮೇಘವೆತ್ತ
ಎತ್ತ ಮಾತುಗಳು ? ಮೋಡ ಜೀವವೇ ? ಏನೋ ಎತ್ತೊ ಚಿತ್ತ ॥
ಭೇದವೆಣಿಸದೆಯೆ ಕಂಡ ಮೋಡವನೆ ಬೇಡಿಕೊಂಡ ತಾನು
ಜಡವೊ ಚೇತನವೊ ಬಯಕೆ ಮರುಳರಿಗೆ ಯಾವ ವಸ್ತುವೇನು ?॥ ೫
 
ಪುಷ್ಕರಾದಿ ಜಗ ಬಲ್ಲ ವಂಶದವನಲ್ಲೆ, ಬಲ್ಲೆ ನಾನು
ಕಾಮರೂಪಿಯೇ ಪ್ರಕೃತಿಪುರಷನೋ ಇಂದ್ರನಲ್ಲಿ ನೀನು ॥
ದೈವ-ಬಂಧು ನೀ ಬೇಡೆ ಕೆಡುಕರಲಿ ; ಬಯಕೆಗೂಡಿಯೇನು ?
ಲೇಸು ಒಳ್ಳ್ಯವರ ಬೇಡಿಕೊಂಬುದೇ ವ್ಯರ್ಥವಾದರೂನು ॥ ೬