This page has been fully proofread once and needs a second look.

ಅಲ್ಲೆ ಕಲ್ಲಿನಲಿ ಶಿವನ ಪಾದ ಮೂಡಿಹವು ಸಿದ್ಧರದನು
ಪೂಜಿಸುವರು ಎಂದೆಂದು, ಹೋಗು ಬಲವಂದು, ಅದುವೆ ಹದನು ॥
ಕರಣವಳಿಯೆ, ಉರು ಪಾಪ ತೊಳೆಯೆ, ದಾಟುವರು ಸಾವಿನೆಲ್ಲೆ
ನಂಬಿದವರು ಗಳಿಸುವರು ಸ್ಥಿರದ ಗಣಪದವಿಯನ್ನು ಇಲ್ಲೆ ॥ ೫೫
 
ತೂತು ಬಿದಿರು ಕೊಳಲಾಗಿ ಊದುತಿರೆ, ಗಾಳಿ ತೂರಿ ನೂಗಿ
ಶಿವನ ತ್ರಿಪುರ ಜಯಗೀತ ಹಾಡೆ ಕಿನ್ನರರು ದನಿಯ ತೂಗಿ ॥
ನಿನ್ನ ಗುಡುಗು ಮದ್ದಳೆ ಮೃದಂಗದೊಲು ತುಂಬೆ ದರಿಯ ಜಾಡು
ಕೂಡಿದಂತೆ ಸರಿ, ಶಿವನ ನಾಟ್ಯಸಂಗೀತ ದೀಡು ಜೋಡು ॥ ೫೬
 
ಮಂಜು ಬೆಟ್ಟವನು ಮೀಟು, ಹಂಸದ್ವಾರವನು ದಾಟು ಓಡು
ಕ್ರೌಂಚ-ರಂಧ್ರದಲ್ಲಿ ವೀರ ಭಾರ್ಗವನಪೂರ್ವಶೌರ್ಯ ನೋಡು ॥
ಉತ್ತರಕ್ಕೆ ಹರಿ ಹಾಗೆ, ತೋರುತಿರೆ ನಿನ್ನ ರೂಪ ಭೇದ
ಬಲಿಯ ಮೆಟ್ಟಲೆಂದೆತ್ತಿದಂಥ ವಿಷ್ಣುವಿನ ಶ್ಯಾಮ ಪಾದ ॥ ೫೭
 
ಹಿಂದೆ ಸಂದ ರಾವಣನು ಬಿಡಿಸಿದನು ಇದರ ಸಂದುಜೋಡು
ದೇವತೆಯರ ಕನ್ನಡಿಯೆ ಆದ ಕೈಲಾಸವದುವೆ ನೋಡು ॥
ಬಾನ ಮುಟ್ಟಿ ಕೆಲ ಶಿಖರವೆತ್ತಿ ಬೆಳಕೊತ್ತಿ ಒಟ್ಟಿದಂತೆ
ದಿನವು ಕೂಡಿ ಹಲರಾಶಿಯಾದ ಶಿವನಟ್ಟಹಾಸದಂತೆ ॥ ೫೮
 
ಎಣ್ಣೆಗಲಸು ಕಾಡಿಗೆಯ ಬಣ್ಣದವ ನೀನು ನಗದ ತುದಿಗೆ
ಕೋರೆ ಹಲ್ಲಗೆರೆಯಂತೆ ಕೊರೆದ ಕೈಲಾಸ ಕೀಳು ಬದಿಗೆ ॥
ಚಿತ್ತ-ಚಿತ್ರಪಟದಲ್ಲೆ ಬಲ್ಲೆ ನೀನಲ್ಲಿ ಹೇಗೆ ಕಾಂಬೆ
ಹೆಗಲಿನತ್ತ ಬಲಭದ್ರ ಹೊತ್ತ ಕಂಬಳಿಯೊ ಏನೋ ಎಂಬೆ ॥ ೫೯
 
ತೋಳ ಹಾವ ಬಿಚ್ಚಿಟ್ಟು ಸತಿಗೆ ಕೈಗೊಟ್ಟು, ಕಾಲನಡಿಗೆ
ಲೀಲೆಯೆನಲು ಶಿವ, ಬೆಟ್ಟವೊತ್ತಬಹುದಾಗ ಗೌರಿಯಡಿಗೆ ॥
ಮೇಘ, ಮೈಯನೊಟ್ಟಯಿಸಿಕೊಂಡು ಘನದಟ್ಟ ಒಟ್ಟಿಲಾಗಿ
ಶಿವನ ಸತಿಯ ಪದತಲಕೆ ಎರಗು ಮಣಿತಟಕೆ ಮೆಟ್ಟಿಲಾಗಿ ॥ ೬೦