This page has not been fully proofread.

"ಶ್ರೀ ಸುಮಧ್ವವಿಜಯ' ಮಾಧ್ವಸಾಹಿತ್ಯದ ಮಾಂಗಲ್ಯ ಕಾವ್ಯ. ಅದು
ಶ್ರೀಮದಾಚಾರ್ಯರ ಐಹಿಕ ಬದುಕಿನ ಹಲವಾರು ಸ್ವಾರಸ್ಯಕರ ಘಟನೆಗಳನ್ನೂ
ಹಾಗೂ ಅವರ ಆಧ್ಯಾತ್ಮಿಕ ಹಿರಿಮೆಯನ್ನೂ ಚಾರಿತ್ರಿಕ ನೆಲೆಗಟ್ಟಿನಲ್ಲಿ ವಿವರಿಸುವ
ಒಂದು ಪ್ರಾಮಾಣಿಕ ಕಾವ್ಯ, ಸಂಸ್ಕೃತ ಸಾಹಿತ್ಯದಲ್ಲಿಯೇ ವಿಶಿಷ್ಟ ಸ್ಥಾನವನ್ನು
ಪಡೆದಿರುವ ಈ ಮಹಾಕಾವ್ಯ ಅಶ್ವಘೋಷನ ಬುದ್ಧ ಚರಿತೆಗಿಂತಲೂ ಹೆಚ್ಚು
ಮಹತ್ವವನ್ನು ಪಡೆದಿರುವುದಾದರೂ, ಸಂಸ್ಕೃತ ಸಾಹಿತ್ಯ ವಿಮರ್ಶನ ಕ್ಷೇತ್ರದಲ್ಲಿ
ಗಳಿಸಬೇಕಾದ ಸ್ಥಾನ ಗಳಿಸದಿರುವುದು ಒಂದು ದುರಂತ ಎಂದು ಅನೇಕ ವಿದ್ವಾಂಸರು
ಅಭಿಪ್ರಾಯ ಪಡುತ್ತಾರೆ. "ಶ್ರೀ ಸುಮಧ್ವವಿಜಯ' ದ ಕರ್ತೃ ಶ್ರೀಮನ್ನಾರಾಯಣ
ಪಂಡಿತರು (ಕ್ರಿ. ಶ. 1295 - 1370) ಅಸಾಮಾನ್ಯ ಪಂಡಿತ ಪರಂಪರೆಯಲ್ಲಿ
ಬೆಳಗಿದ ಪ್ರಕೃತಿಗಳು. ಹದಿನಾರು ಸರ್ಗಗಳಲ್ಲಿ ರಚಿತವಾಗಿರುವ ನಾರಾಯಣ
ಪಂಡಿತಾಚಾರ್ಯರ "ಶ್ರೀ ಸುಮಧ್ವವಿಜಯ' ಮಹಾಕಾವ್ಯವು ಶಾಸ್ತ್ರಾನುಭೂತಿ
ಮತ್ತು ಕಾವ್ಯ ಪ್ರತಿಭೆಗಳ ಸುಂದರ ಸಂಗಮ. "ಶ್ರೀ ಸುಮಧ್ವವಿಜಯ
ವನ್ನೊಳಗೊಂಡು ಸುಮಾರು 25 ಕೃತಿಗಳನ್ನು ಇವರು ರಚಿಸಿದ್ದಾರೆ. ಶೇಷ, ಉಪಮಾ
ಮೊದಲಾದ ಅಲಂಕಾರಗಳನ್ನು ತುಂಬಾ ಸಮರ್ಥವಾಗಿ ಬಳಸುವ ಇವರ ಕಾವ್ಯಗಳ
ರಚನಾ ವೈಖರಿ ಅದ್ಭುತವಾದದ್ದು. ಮಾಧ್ವ ಪರಂಪರೆಯ ಅನೇಕ ಯತಿಶ್ರೇಷ್ಠರು
ಮತ್ತು ಪಂಡಿತ ದಿಗ್ಗಜಗಳೂ ಈ ಕೃತಿಯ ಹೆಗ್ಗಳಿಕೆಯನ್ನು ಹಾಡಿಹೊಗಳಿದ್ದಾರೆ.
 
ಇಂತಹ ಕಾವ್ಯರತ್ನವನ್ನು ಕನ್ನಡಿಸಿ ನುಡಿಯುವ ಸೌಭಾಗ್ಯವನ್ನು ಶ್ರೀ
ಹರಿಯು ನನ್ನಂತಹ ಪಾಮರನಿಗೆ ಕರುಣಿಸಿದ್ದಾನೆ. ಸದ್ಭಕ್ತರು ನನ್ನ ಈ ಪ್ರಯತ್ನವನ್ನು
ಸಹೃದಯತೆಯಿಂದ ಸ್ವೀಕರಿಸುವರೆಂದು ನನ್ನ ನಂಬಿಕೆ.
 
- ಇ. ಡಿ. ನರಹರಿ